ಮಹಾ ಮಳೆಗೆ ರಸ್ತೆ ಬಂದ್: ಮಂಗಳೂರು-ಬೆಂಗಳೂರು ವಿಮಾನದಲ್ಲಿ ಹೋಗೋಕೆ ಕನಿಷ್ಠ 10 ಸಾವಿರ ರೂ.!

Public TV
2 Min Read
Mangalore airport

ಮಂಗಳೂರು: ಮಳೆಯಿಂದ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರಸ್ತೆ ಮಾರ್ಗಗಳೆಲ್ಲಾ ಬಹುತೇಕ ಬಂದ್ ಆಗಿದ್ದರೆ, ಇದರ ಸಂಪೂರ್ಣ ಲಾಭ ಪಡೆಯಲು ವಿಮಾನಯಾನ ಕಂಪೆನಿಗಳು ಮುಂದಾಗಿವೆ. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಇರುವ ದರಕ್ಕಿಂತ ದುಪ್ಪಟ್ಟು – ಮೂರು ಪಟ್ಟು ದರವನ್ನು ನಿಗದಿಗೊಳಿಸಿ ವಿಮಾನಯಾನ ಸಂಸ್ಥೆಗಳು ಗ್ರಾಹಕರನ್ನು ಪೀಡಿಸುತ್ತಿವೆ.

ಸಾಮಾನ್ಯ ದಿನಗಳಲ್ಲಿ 1,500 ರೂ.ಗಳಿಂದ 4 ಸಾವಿರ ರೂ.ವರೆಗೆ ಇರುವ ಮಂಗಳೂರು-ಬೆಂಗಳೂರು ವಿಮಾನದಲ್ಲಿ ಈಗ ನೀವು ಪ್ರಯಾಣಿಸಬೇಕು ಎಂದರೆ ಕನಿಷ್ಠ 10 ಸಾವಿರ ರೂ. ನೀಡಲೇಬೇಕಾದಂತಹ ಅನಿವಾರ್ಯ ಸ್ಥಿತಿಗೆ ತಲುಪಿದೆ. ಇಂದು ಕೆಲವು ಕಂಪೆನಿಗಳು 14,700 ರೂ.ಗೆ ಟಿಕೆಟ್ ನೀಡಿದೆ ಎನ್ನುವುದು ಸದ್ಯಕ್ಕೆ ಬಂದಿರುವ ಲೇಟೆಸ್ಟ್ ನ್ಯೂಸ್.

MNG TRAIN FLIGHT 2

ಕರಾವಳಿ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಬೆಂಗಳೂರು, ಮಂಗಳೂರು ನಡುವಿನ ಶಿರಾಡಿ ಘಾಟ್, ಮಾಣಿಘಾಟ್ – ಮೈಸೂರು ಮಾರ್ಗದ ಹೆದ್ದಾರಿ ಹಾಗೂ ರೈಲು ಮಾರ್ಗ ಬಂದ್ ಆಗಿದೆ. ಅಲ್ಲದೇ ಈ ಮಾರ್ಗಗಳ ಮೂಲಕ ಪ್ರಯಾಣಿಸುವುದು ಕಷ್ಟ ಸಾಧ್ಯವಾಗಿದ್ದು, ಇದರಿಂದ ಹೆಚ್ಚಿನ ಮಂದಿ ವಿಮಾನದಲ್ಲಿ ಪ್ರಯಾಣಿಸಲು ಬೇಡಿಕೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರ ಏರಿಕೆ ಮಾಡಿವೆ. ದಿನಂಪ್ರತಿ ಸಾವಿರಾರು ಪ್ರಯಾಣಿಕರು ಈ ಮಾರ್ಗದಲ್ಲಿ ವಿಮಾನ ಪ್ರಯಾಣ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ 

ಒಂದು ದಿನ ಮುಂಚೆಯೇ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವವರಿಗೆ ಏಕಮುಖ ಸಂಚಾರಕ್ಕೆ 1,500 ರೂ. ದರ ನಿಗದಿ ಮಾಡಲಾಗಿದೆ. ಆದರೆ ತಕ್ಷಣದಲ್ಲಿ ಪ್ರಯಾಣ ಮಾಡಲು ಟಿಕೆಟ್ ಬುಕ್ ಮಾಡಬೇಕಾದರೆ ಅನಿವಾರ್ಯವಾಗಿ ಅಧಿಕ ಮೊತ್ತ ನೀಡಬೇಕಿದೆ. ಸಾಮಾನ್ಯವಾಗಿ ಮಂಗಳೂರು ಹಾಗೂ ಬೆಂಗಳೂರು ನಡುವೆ ವಾರದ ರಜಾ ದಿನಗಳ ಅವಧಿಯಲ್ಲಿ ಮಾತ್ರ ಟಿಕೆಟ್ ದರ 5 ಸಾವಿರ ರೂ.ಗೆ ಹೆಚ್ಚಳವಾಗುವುದು ಈ ಹಿಂದೆ ಸಾಮಾನ್ಯವಾಗಿತ್ತು. ಇದನ್ನೂ ಓದಿ:  ಚಾರ್ಮಾಡಿ ಘಾಟಿಯಲ್ಲಿ ಕಂಟೈನರ್ ಪಲ್ಟಿ: ಭಾರೀ ಟ್ರಾಫಿಕ್ ಜಾಮ್ 

ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‍ನ ಹಲವು ಕಡೆ ಮಳೆಗೆ ಭೂ ಕುಸಿತ ಘಟನೆಗಳು ವರದಿಯಾಗಿದ್ದು, ಆಗಸ್ಟ್ 20ರವರೆಗೆ ಲಘು ವಾಹನಗಳ ಸಂಚಾರ ಹಾಗೂ 25ರವರೆಗೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣಿನ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದಕ್ಕಾಗಿ ಹತ್ತು ದಿನಗಳ ಕಾಲ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ಆಗಸ್ಟ್ 20ರವರೆಗೆ ಎಲ್ಲಾ ವಾಹನ ಹಾಗೂ ಆಗಸ್ಟ್ 25 ರವರೆಗೆ ರಾಷ್ಟ್ರೀಯ ಹೆದ್ದಾರಿ-75 ಶಿರಾಡಿಘಾಟ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.  ಇದನ್ನೂ ಓದಿ:  ಶಿರಾಡಿ ಘಾಟ್‍ ನಲ್ಲಿ ಆ.23ರವರೆಗೆ ಲಘುವಾಹನ, ಆ.25 ವರೆಗೆ ಭಾರೀ ವಾಹನಗಳ ಸಂಚಾರ ನಿರ್ಬಂಧ

Share This Article
Leave a Comment

Leave a Reply

Your email address will not be published. Required fields are marked *