ಲಕ್ನೋ: ಉತ್ತರ ಪ್ರದೇಶದ ಗಾಜಿಯಾಬಾದ್ನ (Ghaziabad) ಹಿಂಡನ್ ವಿಮಾನ ನಿಲ್ದಾಣದಿಂದ (Hindon Airport) ಕೋಲ್ಕತ್ತಾಗೆ (Kolkata) ಹೊರಟಿದ್ದ ಏರ್ ಇಂಡಿಯಾ (Air India) ಎಕ್ಸ್ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಟೇಕಾಫ್ಗೆ ಸ್ವಲ್ಪ ಸಮಯ ಬಾಕಿ ಇರುವಾಗ ತಾಂತ್ರಿಕ ದೋಷ ಕಾಣಿಸಿದ್ದು, ಅನಾಹುತವೊಂದು ತಪ್ಪಿದಂತಾಗಿದೆ.
ಏರ್ ಇಂಡಿಯಾ IX 1511 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ರನ್ವೇಯಲ್ಲಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ವಿಮಾನ ಹಾರಾಟ ಒಂದು ಗಂಟೆ ಕಾಲ ವಿಳಂಬವಾಯಿತು. ಇದರಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ಏರ್ ಇಂಡಿಯಾ ಕ್ಷಮೆಯಾಚಿಸಿದೆ. ಇದನ್ನೂ ಓದಿ: ಬ್ರಿಟನ್ನ F-35 ಫೈಟರ್ ಜೆಟ್ ಕೇರಳದಲ್ಲಿ ತುರ್ತು ಭೂಸ್ಪರ್ಶ – ಕಾರಣ ಏನು?
ವಿಮಾನದಲ್ಲಿನ ತಾಂತ್ರಿಕ ದೋಷದಿಂದಾಗಿ ಹಾರಾಟ ವಿಳಂಬವಾಗಿದೆ. ಪ್ರಯಾಣಿಕರಿಗೆ ಉಚಿತ ಟಿಕೆಟ್ ಮರುಹೊಂದಿಕೆ ಅಥವಾ ರದ್ದತಿಯನ್ನು ಪೂರ್ಣ ಮರುಪಾವತಿಯೊಂದಿಗೆ ಮಾಡಿಕೊಡಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಏರ್ ಇಡಿಯಾ ವಕ್ತಾರರು ತಿಳಿಸಿದ್ದಾರೆ.
ವಿಮಾನವು ರನ್ವೇಗೆ ಬಂದು ನಿರ್ಗಮನಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಸಿಬ್ಬಂದಿಗೆ ಕೊನೆಯ ಕ್ಷಣದಲ್ಲಿ ತೊಂದರೆ ಕಂಡುಬಂದಿದೆ. ಕೂಡಲೇ ಇಂಜಿನಿಯರ್ಗಳನ್ನು ಕರೆಸಿ ಪರಿಶೀಲಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಅಹಮದಾಬಾದ್ನಲ್ಲಿ ಟೆಕಾಫ್ ಆದ ಕೆಲವೇ ಕ್ಷಣದಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು, ವಿಮಾನದಲ್ಲಿದ್ದ 242 ಮಂದಿ ಪೈಕಿ 241 ಮಂದಿ ಸಾವನ್ನಪ್ಪಿದ್ದರು. ಪವಾಡ ಸದೃಶ್ಯ ಎಂಬಂತೆ ಓರ್ವ ಪ್ರಯಾಣಿಕ ಬದುಕುಳಿದಿದ್ದ. ಇದನ್ನೂ ಓದಿ: Explainer: ವಿಮಾನ ಸುಟ್ಟು ಬೂದಿಯಾದರೂ ‘ಬ್ಲ್ಯಾಕ್ಬಾಕ್ಸ್’ಗೆ ಏನಾಗಲ್ಲ – ಏನಿದು ಪೆಟ್ಟಿಗೆ? ಫ್ಲೈಟ್ ಆಕ್ಸಿಡೆಂಟ್ಗಳಲ್ಲಿ ಏಕೆ ಮುಖ್ಯ?