ದೀದಿ ಸರ್ಕಾರಕ್ಕೆ ಬಿಜೆಪಿಯಿಂದ 90 ದಿನಗಳ ಡೆಡ್‍ಲೈನ್

Public TV
1 Min Read
mamata bjp

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಮತ ಬೇಟೆಯಾಡಿದ ಬಿಜೆಪಿಯು ಈಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ 90 ದಿನಗಳ ಗಡುವು ನೀಡಿದೆ.

ಲೋಕಸಭಾ ಚುನಾವಣಾ ಫಲಿತಾಂಶ ನಿನ್ನೆಷ್ಟೇ ಪ್ರಕಟವಾಗಿದ್ದು, ಬಿಜೆಪಿಯು ಪಶ್ಚಿಮ ಬಂಗಾಳದ 40 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಇತ್ತ ಟಿಎಂಸಿ 22 ಸ್ಥಾನ ಪಡೆದಿದ್ದು, ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದೆ. ಈ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಶುರುವಾಗಿದೆ ಎಂದು ವರದಿಯಾಗಿದೆ.

ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರು ಮಾತನಾಡಿ, ಬಿಜೆಪಿ ಅಲೆ ದೇಶದ ಎಲ್ಲ ಕಡೆಯಲ್ಲಿಯೂ ಬೀಸುತ್ತಿದೆ. ಮೋದಿ ಅಲೆ ಪಶ್ಚಿಮ ಬಂಗಾಳದಲ್ಲಿಯೂ ಬೀಸುತ್ತಿದೆ. ಇದರಿಂದಾಗಿ ಟಿಎಂಸಿ ನಾಯಕರು, ಶಾಸಕರು ಬಿಜೆಪಿ ಸೇರಲು ಮುಂದಾಗುತ್ತಿದ್ದಾರೆ. ಕೇವಲ 90 ರಿಂದ 120 ದಿನಗಳಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಅರ್ಜುನ್ ಸಿಂಗ್ ಅವರು ಇತ್ತೀಚೆಗಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಈ ಮೂಲಕ ಬಾರಕ್‍ಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಟಿಎಂಸಿ ಅಭ್ಯರ್ಥಿ ದಿನೇಶ್ ತ್ರಿವೇದಿ ವಿರುದ್ಧ 14,857 ಮತಗಳಿಂದ ಜಯ ಸಾಧಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದ್ದರಿಂದ ಮಮತಾ ಬ್ಯಾನರ್ಜಿ ಅವರು ವಿಚಲಿತರಾಗಿರಾಗಿದ್ದಾರೆ. ಹೀಗಾಗಿ ಪಕ್ಷದ ವಿಜೇತ ಹಾಗೂ ಪರಾಭವಗೊಂಡ ಅಭ್ಯರ್ಥಿಗಳ ಸಭೆಯನ್ನು ಶನಿವಾರ ಕರೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ತಮ್ಮ ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಚರ್ಚೆ ಮಾಡಲಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಟಿಎಂಸಿಯಲ್ಲಿ ಏಕವ್ಯಕ್ತಿ ಅಧಿಕಾರವಿದೆ. ಹೀಗಾಗಿ ಪಕ್ಷದ ಕಾರ್ಯತರು, ಮುಖಂಡರಿಗೆ ಯಾವುದೇ ಪ್ರಾಮುಖ್ಯತೆ ಸಿಗುತ್ತಿಲ್ಲ. ಟಿಎಂಸಿನ ಅನೇಕ ಮುಖಂಡರು, ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. 40 ಶಾಸಕರ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *