25 ಲಕ್ಷ ಜನರಿಂದ ಬಾಲಕ ರಾಮನ ದರ್ಶನ – 11 ಕೋಟಿ ರೂ. ಕಾಣಿಕೆ ಸಂಗ್ರಹ

Public TV
1 Min Read
Ayodhya Ram Lalla

ಅಯೋಧ್ಯೆ: ಇಲ್ಲಿನ ರಾಮಮಂದಿರದಲ್ಲಿ (Ram Mandir) ಬಾಲಕ ರಾಮನ  (Balak Ram) ಪ್ರಾಣ ಪ್ರತಿಷ್ಠೆಯಾದ ಬಳಿಕ ಕಳೆದ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ಸುಮಾರು 11 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ದೇವಾಲಯದ ಟ್ರಸ್ಟ್‍ನ ಕಚೇರಿ ಪ್ರಭಾರಿ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.

ಕಳೆದ 11 ದಿನಗಳಲ್ಲಿ ಸುಮಾರು 8 ಕೋಟಿ ರೂ.ಗಳನ್ನು ಕಾಣಿಕೆ ಪೆಟ್ಟಿಗೆಗಳಲ್ಲಿ ಭಕ್ತರು ಹಾಕಿದ್ದಾರೆ. ಚೆಕ್ ಮತ್ತು ಆನ್‍ಲೈನ್ ಮೂಲಕ ಪಡೆದ ಮೊತ್ತ ಸುಮಾರು 3.50 ಕೋಟಿ ರೂ. ಆಗಿದೆ. ದೇಗುಲದ ಗರ್ಭಗುಡಿಯಲ್ಲಿ ದರ್ಶನ ಪಥದ ಬಳಿ ನಾಲ್ಕು ದೊಡ್ಡ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದ್ದು, ಅದರಲ್ಲಿ ಭಕ್ತರು ದೇಣಿಗೆಯನ್ನು ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂಓದಿ: ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನ ಕೇವಲ 20 ನಿಮಿಷದಲ್ಲಿ ಕೆತ್ತಿದ್ರಂತೆ ಶಿಲ್ಪಿ ಯೋಗಿರಾಜ್‌

ಇದರೊಂದಿಗೆ 10 ಗಣಕೀಕೃತ ಕೌಂಟರ್‌ಗಳಲ್ಲಿ ಜನರು ದೇಣಿಗೆ ನೀಡುತ್ತಾರೆ. ದೇಣಿಗೆ ಕೌಂಟರ್‌ನಲ್ಲಿ ದೇವಸ್ಥಾನದ ಟ್ರಸ್ಟ್ ನೌಕರರನ್ನು ನೇಮಿಸಲಾಗಿದೆ. ಸಂಜೆ ಕೌಂಟರ್ ಮುಚ್ಚಿದ ನಂತರ ಟ್ರಸ್ಟ್ ಕಚೇರಿಯಲ್ಲಿ ಸ್ವೀಕರಿಸಿದ ಕಾಣಿಕೆ ಮೊತ್ತದ ಲೆಕ್ಕವನ್ನು ಸಲ್ಲಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

11 ಬ್ಯಾಂಕ್ ಉದ್ಯೋಗಿಗಳು ಮತ್ತು ದೇವಸ್ಥಾನದ ಟ್ರಸ್ಟ್‌ನ ಮೂವರನ್ನು ಒಳಗೊಂಡ 14 ಜನರ ತಂಡವು ನಾಲ್ಕು ಕಾಣಿಕೆ ಪೆಟ್ಟಿಗೆಗಳಲ್ಲಿ ಕಾಣಿಕೆಗಳನ್ನು ಎಣಿಸುತ್ತದೆ. ದೇಣಿಗೆ ಮೊತ್ತವನ್ನು ಠೇವಣಿ ಇಡುವುದರಿಂದ ಹಿಡಿದು ಎಣಿಸುವವರೆಗೆ ಎಲ್ಲವನ್ನೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಜನವರಿ 22 ರಂದು ರಾಮಮಂದಿರದಲ್ಲಿ ಬಾಲಕ ರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೆರವೇರಿತ್ತು. ಈ ಕಾರ್ಯಕ್ರಮಕ್ಕೆ ದೇಶವಿದೇಶಗಳಿಂದ ಸುಮಾರು 7000 ಕ್ಕೂ ಅಧಿಕ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು.ಇದನ್ನೂಓದಿ: ಲಕ್ನೋದಿಂದ 6 ದಿನ ಕಾಲ್ನಡಿಗೆಯಲ್ಲಿ ತೆರಳಿ ರಾಮಲಲ್ಲಾಗೆ ನಮಿಸಿದ 350 ಮಂದಿ ಮುಸ್ಲಿಮರು!

Share This Article