ಕೊಪ್ಪಳ: ಜಿಲ್ಲೆಯ ಈ ಗ್ರಾಮದಲ್ಲಿ ಕಳೆದ 39 ವರ್ಷಗಳಿಂದ ಜಾತ್ರೆ ಆಗಿರಲಿಲ್ಲ. ದೇವಿ ಪ್ರಸಾದ (ವರ) ಕೊಟ್ಟಿರಲಿಲ್ಲ ಎನ್ನುವ ಕಾರಣಕ್ಕೆ 39 ವರ್ಷಗಳಿಂದ ಜಾತ್ರೆ ಎನ್ನುವುದೇ ಮರೆತು ಹೋಗಿತ್ತು. ಆದರೆ ದೇವಿ ಈ ಬಾರಿ ಪ್ರಸಾದ ಕೊಟ್ಟ ಕಾರಣ ಈ ಬಾರಿ ಅತ್ಯಂತ ಸಂಭ್ರಮದಿಂದ ರಥೋತ್ಸವ ಜರುಗಿತು.
ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ದ್ಯಾಮಮ್ಮ ದೇವಿಯ ಜಾತ್ರೆ 39 ವರ್ಷಗಳಿಂದ ಬಳಿಕ ಬುಧವಾರ ಅದ್ಧೂರಿಯಾಗಿ ರಥೋತ್ಸವ ನಡೆಯಿತು. ಹಲಗೇರಿ ಗ್ರಾಮದಲ್ಲಿ ಕಳೆದ 39 ವರ್ಷದಿಂದ ಜಾತ್ರೆ ನಡೆದಿರಲಿಲ್ಲ, ದ್ಯಾಮಮ್ಮ ದೇವಿ ವರ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ದೇವಿಯ ಜಾತ್ರೆಯನ್ನು ಮಾಡಲು ಗ್ರಾಮಸ್ಥರು ಹಿಂದೇಟು ಹಾಕಿದ್ದರು.
ಈ ಬಾರಿ ದ್ಯಾಮಮ್ಮ ದೇವಿ ವರ ಕೊಟ್ಟ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬುಧವಾರ ಜಾತ್ರೆ ಆಚರಣೆ ಮಾಡಲಾಯಿತು. ಕಳೆದ 9 ದಿನಗಳಿಂದ ಗ್ರಾಮದಲ್ಲಿ ದ್ಯಾಮಮ್ಮ ದೇವಿಯ ಜಾತ್ರೆ ಕಾರ್ಯಕ್ರಮಗಳು ಚಾಲನೆಯಲ್ಲಿದ್ದವು, ಬುಧವಾರ ದ್ಯಾಮಮ್ಮ ದೇವಿಯ ಮಾಹಾರಥೋತ್ಸವ ಜರುಗಿದ್ದು, 39 ವರ್ಷಗಳ ಬಳಿಕ ಗ್ರಾಮದಲ್ಲಿ ಜಾತ್ರೆ ಕಂಡು ಗ್ರಾಮಸ್ಥರು ಫುಲ್ ಖುಷಿ ಆಗಿದ್ದರು. ಈ ಬಾರಿ ದೇವಿ ವರ ಕೊಟ್ಟ ಕಾರಣ ಗ್ರಾಮಸ್ಥರು ದೇವಿಗೆ ನೂತನ ರಥ ಮಾಡಸಿದ್ದರು. ಕಳೆದ 9 ದಿನಗಳಿಂದ ಗ್ರಾಮದಲ್ಲಿ ಹಲವು ಕಟ್ಟು ಪಾಡುಗಳನ್ನು ಹಾಕಲಾಗಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಯಾರೂ ಚಪ್ಪಲಿ ಧರಿಸುವಂತಿಲ್ಲ ಹಾಗೂ ಯಾರೇ ಗ್ರಾಮದಿಂದ ಹೊರಹೋದರು ಸಂಜೆ ಗ್ರಾಮಕ್ಕೆ ಬರಬೇಕು ಎಂದು ನಿಯಮಗಳನ್ನು ಹಾಕಲಾಗಿತ್ತು.
ಈ ಎಲ್ಲ ಕಟ್ಟು ಪಾಡುಗಳ ಮಧ್ಯೆ ಬುಧವಾರ ದ್ಯಾಮಮ್ಮ ದೇವಿ ಜಾತ್ರೆ ಅದ್ಧೂರಿಯಾಗಿ ನಡೆಯಿತು. ರಥೋತ್ಸವಕ್ಕೆ ಅಭಿನವ ಗವಿ ಸಿದ್ದೇಶ್ವರ ಮಾಹಸ್ವಾಮಿಗಳು ಚಾಲನೆ ನೀಡಿದ್ದರು. ದ್ಯಾಮಮ್ಮ ದೇವಿ ಜಾತ್ರೋತ್ಸವದಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಹಲಗೇರಿ ಗ್ರಾಮ ಸೇರಿದಂತೆ ಜಿಲ್ಲೆಯ ನಾನಾ ಭಾಗದ ದ್ಯಾಮಮ್ಮ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ದೇವಿ ದರ್ಶನ ಪಡೆದರು. 39 ವರ್ಷಗಳ ಬಳಿಕ ಗ್ರಾಮದಲ್ಲಿ ನಡೆದ ಜಾತ್ರೆ ಹಾಗೂ ನಿಯಮ ಪಾಲಿಸಿದ ಗ್ರಾಮಸ್ಥರ ಬಗ್ಗೆ ಗವಿ ಮಠದ ಸ್ವಾಮೀಜಿಗಳು ಕೊಂಡಾಡಿದ್ದರು.