ಬೆಳಗಾವಿ: ರಾಜ್ಯದಲ್ಲಿ ಸಚಿವ ಸಂಪುಟ ಪುನರ್ರಚನೆ ಆಗುತ್ತೋ ವಿಸ್ತರಣೆ ಆಗುತ್ತೋ ಗೊತ್ತಿಲ್ಲ. ಆದ್ರೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಸಚಿವರು ಆಗುವ ಸಂದರ್ಭದಲ್ಲಿ ಅದನ್ನು ಮಣ್ಣು ಮಾಡಿದವರು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ. ಸಮ್ಮಿಶ್ರ ಸರ್ಕಾರದ ಪತನ, ಬಿಜೆಪಿ ಸರ್ಕಾರದ ಸ್ಥಾಪನೆ ಆ ಸಂದರ್ಭದಲ್ಲಿ ಎಷ್ಟೇಲ್ಲ ಆಯ್ತು. ಇದಾದ ಬಳಿಕ ನಮ್ಮನ್ನ ಎಂಎಲ್ಸಿ ಮಾಡುವಾಗ ನಮಗೆಲ್ಲಾ ಅನ್ಯಾಯ ಆಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಭಾರತೀಯರಿಗೆ ನಿರ್ಬಂಧ ಹಾಕಿದರೆ ಏನಾಗಬಹುದು: ಬಿಜೆಪಿಗೆ ಎಚ್.ವಿಶ್ವನಾಥ್ ಪ್ರಶ್ನೆ
ಅಸೆಂಬ್ಲಿಯಿಂದ ಆಯ್ಕೆಯಾಗಿ ನಾನು ಕೌನ್ಸಿಲ್ಗೆ ಬರಬೇಕಾಗಿತ್ತು. ಅದನ್ನು ತಪ್ಪಿಸಿ ನಮ್ಮನ್ನು ನಾಮನಿರ್ದೇಶನ ಮಾಡಿದರು. ನಾಮನಿದೇಶನವಾದ ಸದಸ್ಯರಿಗೆ ಮಂತ್ರಿಯಾಗುವ ಯೋಗವಿಲ್ಲ. ಸುಪ್ರೀಂ ಕೋರ್ಟ್ ತೂಗುಗತ್ತಿ ಇದೆ. ಅದು ಗೊತ್ತಿದ್ದು ಕೂಡ ನಮಗೆ ಅನ್ಯಾಯವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ನಮ್ಮನ್ನ ಕಡೆಗಣನೆ ಮಾಡುತ್ತಿಲ್ಲ
ಬಿಜೆಪಿ ನಮ್ಮನ್ನು ಕಡೆಗಣನೆ ಮಾಡಿಲ್ಲ. ಬಿಜೆಪಿ ನಾಯಕರು ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆ. ಯಾರು ಯಾವುದೇ ಪಕ್ಷವನ್ನು ಆಪಾದನೆ ಮಾಡಬಾರದು. ಪಕ್ಷಗಳು ಎಲ್ಲವೂ ಚೆನ್ನಾಗಿರುತ್ತಾವೆ. ಪಕ್ಷ ನಡೆಸುವವರಿಂದ ಪಾರ್ಟಿಗಳು ಹಾಳಾಗುತ್ತಿವೆ. ಪಕ್ಷದ ಸಿದ್ದಾಂತಗಳು ಚೆನ್ನಾಗಿರ್ತವೆ ಪಕ್ಷ ಹಾಳು ಮಾಡುವವರು ನಾಯಕರು ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಯಾರಾದರೂ ಒಬ್ಬರು ಮೋದಿ ಹೆಸರು ಹೇಳುತ್ತಾರಾ. ಯಾರಿಂದ ಇವರೆಲ್ಲಾ ಬಂದಿದ್ದಾರೆ. ಯಾರ ಹೆಸರು ಹೇಳಿ ಮುಂದಿನ ಚುನಾವಣೆಯಲ್ಲಿ ವೋಟ್ ಕೇಳ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಮಾತಾಡಲ್ಲ. ಮಂತ್ರಿಗಳು ಮಾತಾಡಲ್ಲ. ಮುಖ್ಯಮಂತ್ರಿ ಮಾತಾಡುವುದಿಲ್ಲ. ಮೋದಿ ಅವರ ಕಾರ್ಯಕ್ರಮಗಳ ಬಗ್ಗೆ ಯಾರೂ ಮಾತಾಡುವುದಿಲ್ಲ ಎಂದರು.
ಈವರೆಗೂ ಹಿಂದುತ್ವದ ಬಗ್ಗೆ ಮಾತಾಡ್ತಾರೆ. ಮೋದಿ ಅವರು ಹಿಂದುತ್ವ ಬಗ್ಗೆ ಮಾತಾಡಿದ್ದರಾ..? ಮೋದಿ ಅವರೇ ಹಿಂದುತ್ವದ ಬಗ್ಗೆ ಮಾತಾಡಿಲ್ಲ. ಇವರ್ಯಾಕೆ ಮಾತಾಡ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
2023ರ ನಂತರ ನಮಗೆ ಶಾಪ ವಿಮೋಚನೆ ಆಗುತ್ತೆ. ಈ ಕಾರಣಕ್ಕೆ ಸದ್ಯ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸರ್ಕಾರದ ಜೊತೆಗೆ ಕೆಲಸ ಮಾಡುತ್ತೇನೆ. ನಾನು ಸಚಿವ ಸ್ಥಾನ ನೀಡುವಂತೆ ಯಾರಿಗೂ ಸಪೋರ್ಟ್ ಮಾಡಲ್ಲ. ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರು. ಬಿಜೆಪಿ ಸರ್ಕಾರ ಸ್ಥಾಪನೆಗೆ ಅವರು ಕೂಡ ಪ್ರಮುಖ ಕಾರಣರಾದವರು. ಹೈಕಮಾಂಡ್ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತೆ ನೋಡೋಣ. ರಾಜಕಾರಣದಲ್ಲಿ ಕೃತಜ್ಞತೆ ಪದಕ್ಕೆ ಅರ್ಥ ಇಲ್ಲದಂತಾಗಿದೆ. ಕೃತಜ್ಞತೆ ಇಲ್ಲದ ಜನನಾಯಕರಾಗುತ್ತಿದ್ದೇವೆ ನಾವು. ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಲು ದುಡಿಯುತ್ತೇವೆ ಎಂದರು.
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈತಪ್ಪುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ತಪ್ಪಲು ಕಾಣುವ ಕೈಗಳೇ ಕಾರಣ. ರಮೇಶ್ ಜಾರಕಿಹೊಳಿಯನ್ನೂ ನಮ್ಮನ್ನೂ ಕಾಣುವ ಕೈಗಳೇ ಮುಗಿಸುತ್ತವೆ. ಸಿದ್ರಾಮಯ್ಯ, ನಾವು, ಜಾರಕಿಹೊಳಿ, ಹಿಂದುಳಿದ ವರ್ಗದವರು. ಯಾರು ಬದುಕುವ ಹಾಗೇ ಇಲ್ಲ ಇಲ್ಲಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಟ್ರ್ಯಾಕ್ಟರ್, ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಸಾವು
ಜಾರಕಿಹೊಳಿ ಅವರು ಬಿಜೆಪಿ ಸರ್ಕಾರ ಸ್ಥಾಪನೆಗೆ ಪ್ರಮುಖ ಕಾರಣರಾದವರು. ಅವರಿಗೆ ಈ ರೀತಿ ಆಟ ಆಡಿಸುತ್ತಾ ಕುಳಿತಿದ್ದಾರೆ. ಜಾರಕಿಹೊಳಿಯನ್ನ, ವಿಶ್ವನಾಥ್ನ ಯಾರು ತುಳಿಯಲು ಆಗಲ್ಲ. ಇದೆಲ್ಲಾ ತಾತ್ಕಾಲಿಕ, ನಿಮಗೆ ಅಧಿಕಾರ ನಾವೇ ಕೊಟ್ಟಿದ್ದೇವೆ. ನಾವು ಕೊಟ್ಟ ತ್ರಿಶೂಲದಲ್ಲಿ ನಮ್ಮನ್ನ ತಿವಿತಿದ್ದೀರಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.