ಬೆಂಗಳೂರು: ವಿಶ್ವ ವಿಖ್ಯಾತ, ಐತಿಹಾಸಿಕ ಬೆಂಗಳೂರು ಕರಗ ಅದ್ದೂರಿಯಾಗಿ ನೆರವೇರಿದೆ. ಕಳೆದೆರಡು ವರ್ಷದಿಂದ ಕೊರೊನಾ ಹೊಡೆತದಿಂದ ಕಳೆಗುಂದಿದ್ದ ಬೆಂಗಳೂರು ಧರ್ಮರಾಯಸ್ವಾಮಿಯ ಐತಿಹಾಸಿಕ ದ್ರೌಪದಿ ಕರಗ ಉತ್ಸವ ಈ ವರ್ಷ ಅದ್ಧೂರಿಯಾಗಿ ನೆರವೇರಿದೆ. ಮಳೆಯ ಕಾರಣದಿಂದಾಗಿ ನಿಗದಿತ ಸಮಯಕ್ಕಿಂತ ಕೊಂಚ ತಡವಾಗಿ ಕರಗ ಉತ್ಸವವನ್ನು ಆರಂಭಿಸಲಾಯ್ತು.
2 ವರ್ಷಗಳ ಬಳಿಕ ನಡೆದ ಬೆಂಗಳೂರು ಕರಗ ಉತ್ಸವಕ್ಕೆ ಭಕ್ತಸ್ತೋಮವೇ ಭಾಗಿ ಆಗಿತ್ತು. ಇನ್ನು ಈ ಬಾರಿಯೂ ವೀರಕುಮಾರ ಜ್ಞಾನೇಂದ್ರ ಅವರೇ ಕರಗ ಹೊತ್ತು ಸಾಗಿದ್ರು. ಮಳೆಯಿಂದಾಗಿ ತಡವಾಗಿ ಆರಂಭವಾದ ಕರಗ ಮೆರವಣಿಗೆ ಬೆಳಗ್ಗಿನ ಜಾವದವರೆಗೂ ನಡೆಯಿತು. ಚಿತ್ತ ಹುಣ್ಣಿಮೆದಿನ ದುಂಡು ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ಆದಿಶಕ್ತಿ ಸ್ವರೂಪಿಣಿಯಾದ ದ್ರೌಪದಿಯನ್ನು ಭಕ್ತರು ಕಣ್ತುಂಬಿಕೊಂಡರು.
ಕಬ್ಬನ್ಪೇಟೆಯ ಗಲ್ಲಿಗಳು, ರಾಜ ಮಾರ್ಕೆಟ್, ಮಾರ್ಕೆಟ್ ಸರ್ಕಲ್, ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ, ಬಳೇ ಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ, ಕುಂಬಾರ ಪೇಟೆ, ಚೌಡೇಶ್ವರಿ ದೇವಸ್ಥಾನ, ತಿಗಳರ ಪೇಟೆ ಮೂಲಕ ದೇವಸ್ಥಾನಕ್ಕೆ ದ್ರೌಪದಿ ಕರಗ ವಾಪಸಾಯ್ತು. ಇದನ್ನೂ ಓದಿ: ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್ – ಡೆಲ್ಲಿ ವಿರುದ್ಧ ಆರ್ಸಿಬಿಗೆ 16 ರನ್ಗಳ ಜಯ
ಒಟ್ಟಿನಲ್ಲಿ ಕೊರೊನಾ ಕಂಟಕದಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಬೆಂಗಳೂರು ಐತಿಹಾಸಿಕ ಕರಗ ಅದ್ಧೂರಿಯಾಗಿ ನೆರವೇರಿದೆ. ಭಕ್ತ ಸಮೂಹ ದ್ರೌಪದಿ ಕರಗವನ್ನು ಕಣ್ತುಂಬಿಕೊಂಡು ಕೃಪೆಗೆ ಪಾತ್ರರಾದ್ರು.