ಕೊಪ್ಪಳ: 12 ವರ್ಷದ ಗಂಡುಮಗುವಿಗಾಗಿ ಜನ್ಮ ನೀಡಿದ ತಾಯಿ ಮತ್ತು ಸಾಕು ತಾಯಿ ಮಧ್ಯೆ ಮಂಗಳವಾರ ಬೀದಿ ಜಗಳ ನಡೆದಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.
ಗಂಗಾವತಿಯ ಗುಂಡಮ್ಮ ಕ್ಯಾಂಪ್ ನಿವಾಸಿ ಬೀಬಿಜಾನ ಮತ್ತು ಬಳ್ಳಾರಿ ಜಿಲ್ಲೆ ಸಂಡೂರಿನ ನೂರ್ ಜಹಾನ್ ನಡುವೆ 12 ವರ್ಷದ ಶಾಶುವಲಿಗಾಗಿ ನಿನ್ನೆ ಮಾರಾಮಾರಿ ನಡೆದಿದೆ.
ನಡೆದಿದ್ದೇನು?: 12 ವರ್ಷದ ಹಿಂದೆ ಸಂಡೂರಿನ ನೂರ್ ಜಾನ್ ಮೂರನೇ ಮಗುವಿಗೆ ಜನ್ಮ ನೀಡಿದ್ದಳು. ಕೆಲದಿನದಲ್ಲೇ ಪತಿ ಅನೀರಿಕ್ಷಿತವಾಗಿ ಮೃತಪಟ್ಟಿದ್ದರಿಂದ, ಹುಟ್ಟಿದ ಮಗುವಿನ ದೋಷದಿಂದಲೇ ಪತಿ ಸಾವು ಸಂಭವಿಸಿದೆ ಎಂದು ತಿಳಿದು ತನ್ನ ಮೂರನೇ ಮಗುವಿಗೆ 6 ತಿಂಗಳು ಇರುವಾಗಲೇ ಆ ಮಗುವನ್ನು ಸಹೋದರ ಸಂಬಂಧಿ ಬೀಬೀ ಜಾನ್ಗೆ ನೀಡಿದ್ದಾರೆ.
ಇದೀಗ 12 ವರ್ಷದ ಮಗು ಶಾಶುವಲಿಯನ್ನು ತಮಗೆ ಕೊಡುವಂತೆ ನೂರ್ ಜಾನ್ ಕ್ಯಾತೆ ತೆಗೆದಿದ್ದು, ಪ್ರಕರಣ ಗಂಗಾವತಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆದ್ರೆ, ತನಗೆ ಪರಿಚಯವೇ ಇಲ್ಲದ ಜನ್ಮ ನೀಡಿದ ತಾಯಿ ಜೊತೆ ಹೋಗಲು ಶಾಶುವಲಿ ನಿರಾಕರಿಸುತ್ತಿದ್ದಾನೆ.
ಮಗನ ಹೆಸರಿನಲ್ಲಿ ಆಸ್ತಿ ಸಿಗುತ್ತದೆ ಎಂದು ಇಷ್ಟು ದಿನವಿಲ್ಲದ ಮಗುವನ್ನು ಈಗ ಕೇಳುತ್ತಿದ್ದಾರೆ ಎಂಬುದು ಸಾಕು ತಂದೆ-ತಾಯಿ ಆರೋಪ ಮಾಡಿದ್ದಾರೆ. ಕೋರ್ಟ್ ನಲ್ಲಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಹೇಳಿ ಪೊಲೀಸರು ಸಾಗ ಹಾಕಿದ್ದಾರೆ.