ಮೈಸೂರು: ಮೈಸೂರಿನ ರಾಜವಂಶಸ್ಥ ಯದುವೀರ್ ದಂಪತಿ ಕೆಲ ದಿನಗಳ ಹಿಂದೆ ಪುತ್ರನೊಂದಿಗೆ ಅರಮನೆಗೆ ಆಗಮಿಸಿದ್ದು, ಇಂದು ಚಾಮುಂಡಿ ಬೆಟ್ಟದಲ್ಲಿ ಶಾಸ್ತ್ರೋಕ್ತವಾಗಿ ತೊಟ್ಟಿಲು ಪೂಜೆ ನೆರವೇರಿದೆ.
ಪುತ್ರನ ಜನನದ ನಂತರ ಯದುವೀರ್ ದಂಪತಿ ಚಾಮುಂಡಿ ದೇವಿಯ ದರ್ಶನ ಪಡೆದಿದ್ದು, ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಗನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಆವರಣದಲ್ಲಿ ಸಂಪಿಗೆ ಮರಕ್ಕೆ ಗಂಧದ ತೊಟ್ಟಿಲು ಕಟ್ಟಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.
ಫೆ.25ರಂದು ಬೆಂಗಳೂರು ಅರಮನೆಯಲ್ಲಿ ಯದುವೀರ್ ಪುತ್ರನಿಗೆ ನಾಮಕರಣ ಕಾರ್ಯಕ್ರಮ ನೆರವೇರಿತ್ತು. ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ಮಗುವಿಗೆ ನಾಮಕರಣ ಮಾಡಲಾಗಿತ್ತು. ನಂತರ ಮೈಸೂರು ಅರಮನೆಗೆ ಬಂದ ದಂಪತಿಗೆ ಅರಮನೆಯಲ್ಲಿದ್ದ ಮುತ್ತೈದೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದರು. ಮಗನಿಗೆ ಆದ್ಯವೀರ್ ಎಂದು ನಾಮಕರಣ ಮಾಡಲು ಕಾರಣ ಕೇಳಿದಾಗ ಯದುವೀರ್ ಅವರು, ಆದ್ಯಾ ಎಂದರೆ ದುರ್ಗಿ, ಚಾಮುಂಡಿ ಎಂದರ್ಥ. ಮಗುವಿನ ಒಳಿತಿಗಾಗಿ ಆ ಹೆಸರು ಇಡಲಾಗಿದೆ ಎಂದು ತಿಳಿಸಿದ್ದರು.
ಯದುವೀರ್ ದಂಪತಿ ಶೀಘ್ರದಲ್ಲೇ ಪುತ್ರನ ಜೊತೆ ದೇವಾಲಯಗಳಿಗೆ ಪ್ರವಾಸ ಮಾಡಲಿದ್ದಾರೆ.