ಬೆಂಗಳೂರು/ರಾಮನಗರ: ಚಪಾತಿ ಹಾಗೂ ಅವಳಿಗೆ ಇಷ್ಟವಾಗಿರುವ ಸೊಪ್ಪು ಪಲ್ಯ ಮಾಡಿದ್ದೆ. ಆದರೆ ತಿನ್ನೋಕೆ ನನ್ನ ಮಗಳೇ ಬರಲಿಲ್ಲ ಎಂದು ನಟಿ ಸೌಜನ್ಯ ಯಾನೆ ಸವಿ ಮಾದಪ್ಪ ತಾಯಿ ಕಣ್ಣೀರು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಗಳು ಬರುತ್ತೇನೆ ಅಂತ ಹೇಳಿದ್ಳು. ಇತ್ತ ಇನ್ನೊಬ್ಬ ಮಗ ಕೂಡ ಬೆಂಗಳೂರಲ್ಲಿದ್ದು, ಅವನು ಕೂಡ ಬರುತ್ತೇನೆ ಅಂತ ಹೇಳಿದ್ದ. ಆದರೆ ಆತ ಬೈಕಲ್ಲಿ ಬರುತ್ತೇನೆ, ಇವಳು ಗಾಡಿಯಲ್ಲಿ ಬರುತ್ತೇನೆ ಎಂದು ಹೇಳಿದ್ದಳು. ಆಗ ನಾನು ಸ್ವಲ್ಪ ಬೇಗ ಬನ್ನಿ ಅಂತ ಜೋರು ಮಾಡಿದೆ. ಅವಳು ಆಯ್ತಮ್ಮ ಬರುತ್ತೇವೆ, 3 ಗಂಟೆಯ ಪ್ರಯಾಣ ಅಲ್ವ ಅಂತ ಹೇಳಿದಳು ಅಂತ ಬೇಸರ ವ್ಯಕ್ತಪಡಿಸಿದರು.
ಅಲ್ಲದೆ ಸೊಪ್ಪು ಪಲ್ಯ ಮಾಡು, ಟೊಮೆಟೋ ಸಾಂಬಾರು ಮಾಡು ಅಂತಾನೂ ಹೇಳಿದ್ದಳು. ಹಾಗಾಗಿ ನಾನು ಅವಳಿಗೋಸ್ಕರ ಇಷ್ಟಚಾಗಿರುವ ಸೊಪ್ಪು ಪಲ್ಯ ಮಾಡಿದ್ದೆ. ಆದರೆ ಅದನ್ನು ತಿನ್ನೋಕೆ ನನ್ನ ಮಗಳೇ ಬರಲಿಲ್ಲ ಎಂದು ಹೇಳುತ್ತಾ ಮಗಳನ್ನು ನೆನೆದು ಕಣ್ಣೀರು ಹಾಕಿದರು. ಇದನ್ನೂ ಓದಿ: ಕಿರುತೆರೆ ನಟಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಓರ್ವ ನಟ, ಸವಿ ಪಿಎ ವಿರುದ್ಧ ತಂದೆ ದೂರು
ಇತ್ತ ಸೌಜ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಕೆಯ ತಂದೆ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಕಿರುತೆರೆಯ ಓರ್ವ ನಟ ಹಾಗೂ ಸವಿ ಪಿ.ಎ ಮಹೇಶ್ ವಿರುದ್ಧ ಸವಿ ತಂದೆ ಮಾದಪ್ಪ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ- ಮಗಳ ಸಾವಿನ ಬಗ್ಗೆ ಅನುಮಾನ ಇದೆ ಎಂದ ತಂದೆ
ಕನ್ನಡ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಸೌಜನ್ಯ(25) ಇಂದು ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್ಮೆಂಟ್ನಲ್ಲಿ ಆಥ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಳೆ ಆರ್.ಆರ್.ಆಸ್ಪತ್ರೆಯಲ್ಲಿ ಮೃತಳ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತಿದೆ.