ಬೆಂಗಳೂರು: ಮೊಗ್ಗಿನ ಮನಸ್ಸಿನ ಖ್ಯಾತ ನಟಿ ಶುಭಾ ಪೂಂಜಾ ಅವರ ಮದುವೆಯ ವಿಚಾರವಾಗಿ ಕರ್ನಾಟಕದ ಎಲ್ಲೆಡೆಯಲ್ಲಿ ಸುದ್ಧಿಗಳು ಹರಡುತ್ತಿದ್ದು, ಅವರ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಟಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ಎಲ್ಲಾ ಅಭಿಮಾನಿಗಳ ನಿರೀಕ್ಷೆ ಯಾವಾಗ ಮದುವೆ?
ಡಿಸೆಂಬರ್ ತಿಂಗಳಿನಲ್ಲಿಯೇ ಮದುವೆಯ ಬಗ್ಗೆ ಯೋಜನೆ ಮಾಡಿದ್ದೇವೆ. ಮಂಗಳೂರಿನಲ್ಲಿ ಸಿಂಪಲ್ ಆಗಿ ಮದುವೆ ಆಗಬೇಕು ಅಂದುಕೊಂಡಿದ್ದೇನೆ. ನಂತರ ಬೆಂಗಳೂರಿನಲ್ಲಿ ಯೋಚನೆ ಮಾಡಿದ್ದೇವೆ. ಮದುವೆ ಮುಂದೆ ಹೋದರೂ ಜನವರಿ 10ರ ಒಳಗಾಗಿ ನಡೆಯಲಿದೆ. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್
ಮದುವೆಯ ಪ್ಲ್ಯಾನ್ ಹೇಗಿದೆ?
ನಾನು ಯಾವತ್ತೂ ಈ ರೀತಿ ಹೆಚ್ಚು ಪ್ಲ್ಯಾನ್ ಮಾಡಿಲ್ಲ. ಬಹಳ ಸಿಂಪಲ್ ಆಗಿ ಮದುವೆ ನಡೆಯಬೇಕು ಎಂಬುದು ನಮ್ಮಿಬ್ಬರಿಗೂ ಆಸೆ. ನಾವಿಬ್ಬರೂ ಮಂಗಳೂರು ಮೂಲದವರು. ನಾನು ಉಡುಪಿ ಹಾಗೂ ಅವರು ಕುಂದಾಪುರ. ಆದ್ದರಿಂದ ನಮ್ಮ ಮದುವೆ ಕುಟುಂಬದವರು ಹಾಗೂ ಹಿರಿಯರ ಸಮ್ಮುಖದಲ್ಲಿ, ದೇವಸ್ಥಾನದಲ್ಲಿ ನಡೀಬೇಕು ಅಂದುಕೊಂಡಿದ್ದೇವೆ.
ಜರ್ನಲಿಸ್ಟ್ ಪಾತ್ರದ ಬಗ್ಗೆ:
ರೈಮ್ಸ್ ಚಿತ್ರದಲ್ಲಿ ರಿಪೋರ್ಟರ್ ಪಾತ್ರವನ್ನು ಹೊಸ ಬದಲಾವಣೆಗಾಗಿ ಒಪ್ಪಿಕೊಂಡಿದ್ದೆ. ಅದರಲ್ಲೂ ಕ್ರೈಂ ರಿಪೋರ್ಟರ್ ಪಾತ್ರವಾಗಿದ್ದರಿಂದ ಡೈರೆಕ್ಟರ್ ಪ್ರಿಪರೇಶನ್ ಮಾಡಲು ಹೇಳಿದ್ದರು. ನನಗೆ ಬಹಳಷ್ಟು ಜನ ಜರ್ನಲಿಸ್ಟ್ಗಳು ಪರಿಚಯ ಹಾಗೂ ಸ್ನೇಹಿತರಾಗಿರುವ ಕಾರಣ ಅವರ ಹಾವಾಭಾವಗಳ ಬಗ್ಗೆ ತಿಳಿದಿತ್ತು. ಇದರಿಂದ ಪ್ರಾಕ್ಟಿಸ್ನ ಅವಶ್ಯಕತೆ ಇಲ್ಲ ಎಂದುಕೊಂಡಿದ್ದೆ. ಆದರೆ ಕಂಪ್ಯೂಟರ್ನಲ್ಲಿ ಟೈಪಿಂಗ್ ವಿಚಾರ ಬಂದಾಗ ಸ್ವಲ್ಪ ಕಷ್ಟವಾಯಿತು. ಆದರೆ ಎರಡು ದಿನಗಳಲ್ಲೇ ಎಲ್ಲವನ್ನೂ ಅರಿತುಕೊಂಡೆ.
ಜರ್ನಲಿಸ್ಟ್ ಪಾತ್ರದಲ್ಲಿ ಸೀರಿಯಸ್ ಆಗಿ ನಟನೆ ಮಾಡುವುದೇ ನನಗೆ ಒಂದು ಸವಾಲಾಗಿತ್ತು. ಇಡೀ ಸಿನೆಮಾದಲ್ಲಿ ಒಂದು ಬಾರಿಯೂ ನಗುವ ಸೀನ್ ಇರಲಿಲ್ಲ ಎಂಬುವುದೇ ಬೇಜಾರಿನ ವಿಷಯ. ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಸೀಕ್ರೆಟ್ ಕೋಡ್- ಯಾರ್ಯಾರಿಗೆ ಆಹ್ವಾನ?
ಹೊಸ ಹೇರ್ ಸ್ಟೈಲ್ ಬಗ್ಗೆ ಹೇಳಿ:
ಸಿನಿಮಾಗೋಸ್ಕರ ಕೂದಲನ್ನು ಗುಂಗುರು ಮಾಡಿಸಿಕೊಂಡಿದ್ದೇನೆ. 3-4 ವರ್ಷಗಳಿಂದ ಕೂದಲು ಕತ್ತರಿಸಿರಲಿಲ್ಲ. ಸ್ವಲ್ಪ ಬದಲಾವಣೆ ಇರಲಿ ಎಂಬ ಕಾರಣಕ್ಕೆ ಕತ್ತರಿಸಿದೆ.
ಇತ್ತೀಚೆಗೆ ಹೋಗಿದ್ದ ಪ್ರವಾಸ ಹೇಗಿತ್ತು?
ಸುಮಾರು ನಾಲ್ಕು ವರ್ಷಗಳ ಬಳಿಕ ಮಾರಿಕಾಂಬ ದೇವಸ್ಥಾನದ ಕಡೆ ಹೋಗಿದ್ದೆ. ಶಿರಸಿ, ಸಾಗರ, ಹಾಗೂ ಗೋಕರ್ಣಕ್ಕೆ ಹೋಗಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ಬಿಗ್ಬಾಸ್ ನಿಂದ ಹೊರಗಡೆ ಬಂದ ಬಳಿಕ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಉತ್ತರಕನ್ನಡದ ಕಡೆ ಒಂದು ಸುತ್ತು ಹೋಗಿ ಬಂದಿದ್ದೇನೆ.
ಅಪ್ಪು ಅವರೊಂದಿಗಿನ ಒಡನಾಟದ ಹೇಗಿತ್ತು?
ಆ ನೋವು ಇವತ್ತಿಗೂ ಕಾಡುತ್ತಿದೆ. ಅವರು ಅಗಲಿ ಒಂದು ತಿಂಗಳು ಕಳೆದರೂ ಅವರನ್ನು ಮರೆಯುವುದು ಅಸಾಧ್ಯ. ಇಡೀ ಕರ್ನಾಟಕ ಅವರನ್ನು ಎಷ್ಟೊಂದು ನೆಚ್ಚಿಕೊಂಡಿತ್ತು ಎಂಬುದನ್ನು ನಾವು ಈಗ ಕೂಡಾ ಕಾಣುತ್ತಿದ್ದೇವೆ. ಅವರೊಂದಿಗೆ ನಾನು ಕೆಲಸ ಮಾಡದೇ ಇರಬಹುದು. ಆದರೆ ಒಂದು ಘಟನೆಯನ್ನು ನಾನು ಯಾವಾಗಲೂ ನೆನಪು ಮಾಡಿಕೊಳ್ಳುತ್ತ ಇರುತ್ತೇನೆ.
ಎಂಟು ವರ್ಷಗಳ ಹಿಂದೆ ಮೀನಾಕ್ಷಿ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಾನು ಹಾಗೂ ರಘು ಮುಖರ್ಜಿ ಅಪ್ಪು ಅವರ ಮನೆಯ ಬಳಿ ಹೋಗಿದ್ದೆವು. ನಾವು ಇಲ್ಲದ ಸಮಯದಲ್ಲಿ ಶೂಟಿಂಗ್ ಮ್ಯಾನೇಜರ್ ಬಳಿ ಯಾವ ಶೂಟಿಂಗ್ ನಡೀತಾ ಇದೆ ಎಂದು ಅಪ್ಪು ಖುದ್ದಾಗಿ ಕೇಳಿದ್ದರು. ರಘು ಮುಖರ್ಜಿ ಹಾಗೂ ಶುಭಾ ಪೂಂಜಾ ಅವರ ಚಿತ್ರದ ಶೂಟಿಂಗ್ ನಡೆಯುತ್ತಿದ್ದುದರ ಬಗ್ಗೆ ಅವರಿಗೆ ತಿಳಿಸಿದ್ದರು. ಶೂಟಿಂಗ್ ಮುಗಿದ ತಕ್ಷಣ ಇಡೀ ಟೀಮ್ ಮನೆಗೆ ಬರುವಂತೆ ಹೇಳಿದ್ದರು.
ಅಂಥಾ ದೊಡ್ಡ ಸ್ಟಾರ್ ಮನೆಗೆ ಬರುವಂತೆ ಹೇಳಿದ ವಿಚಾರ ತಿಳಿದು ಹೋಗುವುದೋ ಬೇಡವೋ ಎಂಬ ಗೊಂದಲದಲ್ಲಿದ್ದೆವು. ಅಷ್ಟರಲ್ಲೇ ಅಪ್ಪು ಸಾರ್ ಮತ್ತೆ ಕರೆ ಮಾಡಿ ಆಹ್ವಾನ ನೀಡಿದರು. ನಾವು ಇಡೀ ಟೀಮ್ ಅವರ ಮನೆಗೆ ಹೋಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದೆವು. ಆ ಸಂದರ್ಭದಲ್ಲಿ ಅವರು ನಮಗೆ ಸತ್ಕರಿಸಿದ ರೀತಿಯನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಿರುತ್ತೇನೆ.