ಚಿತ್ರದುರ್ಗ: ಸ್ಯಾಂಡಲ್ವುಡ್ನ ಮೊಗ್ಗಿನ ಮನಸ್ಸಿನ ನಟಿ ಶುಭಾ ಪೂಂಜಾ ಮದುವೆ ಹಾಗೂ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ಶುಭಾ ಪೂಂಜಾ ಬುಧವಾರ ಕೋಟೆನಾಡು ಚಿತ್ರದುರ್ಗಕ್ಕೆ ಗೂಗಲ್ ಚಿತ್ರತಂಡದೊಂದಿಗೆ ಪ್ರಮೋಶನ್ ಗಾಗಿ ಆಗಮಿಸಿದ್ದರು. ಈ ವೇಳೆ ಅವರ ನಿಜಜೀವನದ ಅನೇಕ ಸತ್ಯಗಳನ್ನು ಪಬ್ಲಿಕ್ ಟಿವಿ ಮುಂದೆ ಬಿಚ್ಚಿಟ್ಟರು. ಅದೇನೆಂದರೆ ಈ ಹಿಂದೆ ಶೂಟಿಂಗ್ ವೇಳೆ ಯಾರೋ ಅಭಿಮಾನಿಗಳು ಮಾಡಿದ ಅವಾಂತರಕ್ಕೆ ಶುಭ ಪೂಂಜಾ ವಿವಾಹ ಗೂಗಲ್ ಚಿತ್ರದ ನಿರ್ದೇಶಕ ಹಾಗು ನಟ ನಾಗೇಂದ್ರ ಪ್ರಸಾದ್ ಜೊತೆ ಆಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ವಿವಾಹ ಆಗಿಲ್ಲ, ಅದು ಕೇವಲ ಚಿತ್ರೀಕರಣಕ್ಕಾಗಿ ಹಾಗೆ ಸಿದ್ಧವಾಗಿದ್ದೆವು. ಆದರೆ ದೇವಸ್ಥಾನದಲ್ಲಿ ಶೂಟಿಂಗ್ ಮಾಡೋ ವೇಳೆ ಯಾರೋ ಅಭಿಮಾನಿಯೊಬ್ಬ ಆ ಚಿತ್ರ ತೆಗೆದು ಎಲ್ಲೆಡೆ ಪ್ರಚಾರ ಮಾಡಿದ್ದ ಎಂದರು.
ನಾನು ಸದ್ಯಕ್ಕೆ ಇನ್ನು ನಾಲ್ಕು ವರ್ಷದವರೆಗೆ ರಾಜಕೀಯಕ್ಕೆ ಬರಲ್ಲ. ಆದರೆ ಮುಂದೇನು ಆಗುತ್ತೆ ಎನ್ನುವುದು ಗೊತ್ತಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದರು.
ಈ ಗೂಗಲ್ ಚಿತ್ರದಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ನಟಿಸಿ ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಾಗೇಂದ್ರ ಪ್ರಸಾದ್, ನಿತ್ಯವೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ನಡೆಯುವ ಘಟನೆಗಳ ಆಧಾರಿತ ಚಿತ್ರ ಇದಾಗಿದೆ. ಎಲ್ಲಾ ವಯೋಮಾನದವರಿಗೂ ಈ ಗೂಗಲ್ ಚಿತ್ರ ಇಷ್ಟವಾಗಲಿದ್ದು, ಈಗಾಗಲೇ ಚಿತ್ರದ ಹಾಡುಗಳು ಎಲ್ಲರ ಮನಸೆಳೆದಿವೆ. ಅಲ್ಲದೇ ಈವರಗೆ ಕೇವಲ ಗ್ಲಾಮರಸ್ ಹಾಗು ಹಳ್ಳಿ ಹುಡುಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶುಭಾ ಪೂಂಜಾ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಗೃಹಿಣಿಯಾಗಿ ಅಭಿನಯಿಸುತ್ತಿದ್ದಾರೆ. ಯುವಕರ ಹಾರ್ಟ್ ಬೀಟ್ ಇನ್ನಷ್ಟು ಹೆಚ್ಚಿಸುವಂಥಹ ಸಂಭಾಷಣೆ, ಚಿತ್ರಕಥೆ ಹಾಗು ರಸಿಕತೆಯ ದೃಶ್ಯಗಳು ಚಿತ್ರದಲ್ಲಿದೆ. ಆದರೆ ಶುಭಾ ಪೂಂಜಾ ಜೊತೆ ನಾನು ವಿವಾಹವಾಗಿಲ್ಲ. ಕೇವಲ ಶೂಟಿಂಗ್ ಗಾಗಿ ಹಾಕಿದ್ದ ಕಾಸ್ಟ್ಯೂಮ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಈ ಅವಾಂತರ ಸೃಷ್ಟಿಸಿದೆ ಎಂದು ಸ್ಪಷ್ಟಪಡಿಸಿದರು.
ಬ್ಯೂಟಿ ಕ್ವೀನ್ ಅಮೃತರಾವ್ ಹಾಗು ಉದಯೋನ್ಮುಖ ನಾಯಕನಟ ದೀಪಕ್ ಕೂಡ ಉತ್ತಮವಾಗಿ ಅಭಿನಯಿಸಿ ಎಲ್ಲರನ್ನು ರಂಜಿಸಲಿದ್ದಾರೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದ್ರು.
ಒಟ್ಟಾರೆ ಕೋಟೆನಾಡು ಚಿತ್ರದುರ್ಗದಲ್ಲಿ ಗೂಗಲ್ ಚಿತ್ರತಂಡ ಭರ್ಜರಿಯಾಗಿ ಪ್ರಮೋಷನ್ ಮಾಡಿತು. ಕಾಲೇಜುಗಳ ಆವರಣ ಹಾಗು ಕೋಟೆ ಮುಂಭಾಗದಲ್ಲಿ ಅಭಿಮಾನಿಗಳೊಂದಿಗೆ ಚಿತ್ರದ ಹಾಡುಗಳನ್ನು ಸ್ಥಳದಲ್ಲಿಯೇ ಬಾರ್ ಕೋಡ್ ಮೂಲಕ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿ ವಿಭಿನ್ನವಾಗಿ ಪ್ರಮೋಶನ್ ಮಾಡಿ ಮನಸೆಳೆದರು.