ಕನ್ನಡದ ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ (Besagarahalli Ramanna) ಅವರ ಕಥೆಯನ್ನು ಆಧರಿಸಿ ತಯಾರಾಗಿರುವ ನಾನು ಕುಸುಮ (Naanu Kusuma) ಚಿತ್ರ, ಕೃಷ್ಣೇಗೌಡ (Krishna Gowda) ನಿರ್ಮಿಸಿ, ನಿರ್ದೇಶಿಸಿರುವ ಮಹಿಳಾ ಪ್ರಧಾನ ಸಿನಿಮಾ. ಈಗಾಗಲೇ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಅನೇಕ ಪ್ರಶಸ್ತಿ, ಪ್ರಶಂಸೆಗಳನ್ನು ಪಡೆದುಕೊಂಡಿರುವ ‘ನಾನು ಕುಸುಮ’ ಸಿನಿಮಾ ಇದೇ ಜೂನ್ 30ರಂದು ತೆರೆಗೆ ಬರಲು ದಿನಾಂಕ ನಿಗದಿಯಾಗಿದೆ.
ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ನಾನು ಕುಸುಮ ಚಿತ್ರದ ಕುರಿತು ಮನದಾಳದ ಅನುಭವ ಹಂಚಿಕೊಂಡ ಕುಸುಮ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ಗ್ರೀಷ್ಮಾ ಶ್ರೀಧರ್ (Greeshma Sridhar), ‘ಹಳ್ಳಿಯಿಂದ ನಗರಕ್ಕೆ ಬರುವ ಬಡತನದ ಹಿನ್ನೆಲೆಯ ಹುಡುಗಿಯೊಬ್ಬಳು ಇಲ್ಲಿ ಏನೇನು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಾಳೆ ಎಂಬುದರ ಸುತ್ತ ಸಿನಿಮಾದಲ್ಲಿ ನನ್ನ ಪಾತ್ರ ಸಾಗುತ್ತದೆ. ಇಲ್ಲಿ ಹೆಣ್ಣೊಬ್ಬಳ ಹೋರಾಟವಿದೆ. ನಮ್ಮ ನಡುವೆಯೇ ನಡೆಯುವ ಅನೇಕ ವಿಷಯಗಳು ಸಿನಿಮಾದಲ್ಲಿವೆ’ ಎಂದು ನಾನು ಕುಸುಮ ಸಿನಿಮಾದ ಕಥಾಹಂದರದ ಎಳೆ ಬಿಚ್ಚಿಡುತ್ತಾರೆ. ಇದನ್ನೂ ಓದಿ:ಲವ್ ಮೀ ಆರ್ ಹೇಟ್ ಮೀ ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯ
ಸಾಕಷ್ಟು ಅನುಭವದ ಮೂಟೆಯನ್ನ ಕೊಟ್ಟಿರುವ ಈ ಚಿತ್ರದ ನಟನೆ ಗ್ರೀಷ್ಮಾರಿಗೆ ಒಂದೊಳ್ಳೆ ನೆನಪು ಮತ್ತು ತೃಪ್ತಿಯನ್ನು ಕೊಟ್ಟಿದೆಯಂತೆ. ಸವಾಲೆನಿಸುವ ಪಾತ್ರವನ್ನ ತಮಗೆ ಕೊಟ್ಟಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ಹೇಳುವ ಇವರದು ಕುಸುಮ ಎಂಬ ನರ್ಸ್ ಪಾತ್ರದ ಮುಖ್ಯ ಭೂಮಿಕೆಯ ಪಾತ್ರ. ಮೊದಲ ಬಾರಿಗೆ ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಗ್ರೀಷ್ಮಾ ಶ್ರೀಧರ್, ಪಾತ್ರ ನೈಜವಾಗಿ ಬರಬೇಕೆಂಬ ಕಾರಣಕ್ಕಾಗಿ ನರ್ಸ್ ಗಳ ಹಾವ-ಭಾವ ಎಲ್ಲವನ್ನೂ ಎರಡು ವಾರಗಳಿಂದ ಆಸ್ಪತ್ರೆಯಲ್ಲೇ ಇದ್ದು ಹತ್ತಿರದಿಂದ ನೋಡಿ ಕಲಿತುಕೊಳ್ಳುವ ಪ್ರಯತ್ನ ಮಾಡಿದ್ದೇನೆ’ ಎಂದು ಪಾತ್ರಕ್ಕೆ ಮಾಡಿಕೊಂಡ ತಯಾರಿ ಬಗ್ಗೆ ವಿವರಣೆ ಕೊಡುತ್ತಾ, ತಮ್ಮ ಸಿನಿಮಾ ಮತ್ತು ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ.
ಅರ್ಜುನ್ ರಾಜಾ ಛಾಯಾಗ್ರಹಣ, ಶಿವಕುಮಾರ್ ಸ್ವಾಮಿ ಸಂಕಲನ ನಾನು ಕುಸುಮ ಚಿತ್ರಕ್ಕಿದ್ದು, ‘ಸಿನಿಮಾದಲ್ಲಿ ಗ್ರೀಷ್ಮಾ ಶ್ರೀಧರ್ ಅವರೊಂದಿಗೆ ಸನಾತನಿ ಜೋಶಿ, ಕೃಷ್ಣೇಗೌಡ, ಕಾವೇರಿ ಶ್ರೀಧರ್, ಸೌಮ್ಯ ಭಾಗವತ್, ವಿಜಯ್ ಮತ್ತಿತರರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲ ಇತ್ತೀಚೆಗಷ್ಟೇ ನಡೆದ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಕನ್ನಡ ಸಿನಿಮಾ ವಿಭಾಗದಲ್ಲಿ ಪ್ರಥಮ ಸಿನಿಮಾವಾಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ನಾನು ಕುಸುಮ ಚಿತ್ರವನ್ನ ಜೂನ್ 30 ರಂದು ಥಿಯೇಟರ್ ನಲ್ಲಿ ನೋಡಿದ ಸಿನಿಪ್ರಿಯರು ಏನ್ ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.