ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದು, ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆ ಆಗಬೇಕು ಎಂಬುದು ಎಲ್ಲರ ಆಶಯ ಎಂದು ಹೇಳಿದ್ದಾರೆ.
ಕೆಜಿಎಫ್ 2 ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಯಶ್ ಅವರು, ರಾಜಕೀಯದಲ್ಲಿ ಆಗುತ್ತಿರುವ ಗೊಂದಲಗಳಿಂದ ಸಹಜವಾಗಿ ಬೇಸರ ಆಗಿದೆ. ಮುಂದೆ ಬರುವ ಸರ್ಕಾರ ರಾಜ್ಯದ ಜನರ ಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಬಹಳಷ್ಟು ಯೋಜನೆಗಳು ಆಗಬೇಕಿದೆ ಎಂದು ಜನರು ಕಾಯುತ್ತಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದರು.
ಪಕ್ಷಗಳ ಆಂತರಿಕ ಸಮಸ್ಯೆಯಿಂದ ರಾಜ್ಯದ ಜನರಿಗೆ ಅನ್ಯಾಯ ಆಗುವುದು ಒಳ್ಳೆದಲ್ಲ ಎಂಬುವುದು ಅಷ್ಟೇ ನಮ್ಮ ಉದ್ದೇಶ. ಯಾರು ಅಧಿಕಾರಕ್ಕೆ ಬಂದರೂ ಕೂಡ ಒಂದು ನಿಶ್ಚಿತ ಸರ್ಕಾರ ರಚನೆ ಆಗಬೇಕು. ಆ ಮೂಲಕ ಒಳ್ಳೆಯ ಯೋಜನೆಗಳು ಜಾರಿ ಆಗಬೇಕು. ಇಂತಹ ಸಂದರ್ಭದಲ್ಲಿ ಎಲ್ಲರಂತೆ ನಮಗೂ ಬೇಸರ ಆಗುತ್ತದೆ. ಆದರೆ ಮುಂದೆ ಬರುವ ಸರ್ಕಾರ ಉತ್ತಮವಾಗಿ ಇರಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದ ಯಶ್, ಸಂಸದೆಯಾಗಿ ಕಾರ್ಯನಿರ್ವಹಿಸುತ್ತಿರುವ ಸುಮಲತಾ ಅವರ ಕೆಲಸಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದರು. ಮಂಡ್ಯಕ್ಕೆ ಹೊಸ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಕೇಂದ್ರ ನಾಯಕರ ಸಲಹೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಸುಮಲತಾ ಅವರ ಕೆಲಸ ನೋಡಿ ಖುಷಿ ಆಗುತ್ತಿದೆ, ಅವರು ಎಲ್ಲೆ ಹೋದರೂ ನನಗೆ ಆಗಾಗ ಮಾಹಿತಿ ನೀಡುತ್ತಾರೆ. ಜನತೆಗೆ ಬೇಕಾದ ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ. ಕೇಂದ್ರ ಸರ್ಕಾರದ ನಾಯಕರು ಕೂಡ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದಿದ್ದಾರೆ. ಸುಮಲತಾರ ಕಾರ್ಯ ನಮಗೇ ಖುಷಿ ತಂದಿದೆ ಎಂದರು. ಇದನ್ನು ಓದಿ: ಜಿಲ್ಲೆಯ ಸಮಸ್ಯೆ ಬಗೆಹರಿಸಿಕೊಡಿ – ಅಮಿತ್ ಶಾ ಬಳಿ ಸುಮಲತಾ ಮನವಿ