ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಗೆ ಘಟಾನುಘಟಿ ನಾಯಕರು ಭೇಟಿ ಕೊಡುತ್ತಿದ್ದಾರೆ. ಪಕ್ಷ ಭೇದ ಮರೆತು ಎಲ್ಲಾ ನಾಯಕರು ಹುಲಿಯಾ ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ. ಹಾಗೆಯೇ ಇಂದು ಒಳ್ಳೆ ಹುಡ್ಗ ಪ್ರಥಮ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಭೇಟಿ ಬಳಿಕ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪ್ರಥಮ್, ಈಗಷ್ಟೇ ಸಿದ್ದರಾಮಣ್ಣರನ್ನ ಭೇಟಿಯಾದೆ. ನನ್ನ ನೋಡಿದ ಕೂಡಲೇ ನಾಳೆ ನಾನೇ ಡಿಸ್ಚಾರ್ಜ್ ಆಗ್ತಿದ್ದೆ, ಮನೆಗೆ ಬರುವಂತೆ ಅಂದ್ರು. ಅದೇನೋ ಗೊತ್ತಿಲ್ಲ ನೋಡಿದ ಕೂಡಲೇ ಖುಷಿ ಪಟ್ರು! ನನ್ನ ಎಲ್ಲಾ ಕಾರ್ಯಕ್ರಮದಲ್ಲೂ ಸಿದ್ದರಾಮಣ್ಣ ಜೊತೆಲಿ ಇರ್ತಾರೆ. ಯಾವಾಗ್ಲೂ ಬರೀ ಆರೋಗ್ಯ ವ್ಯತ್ಯಾಸದ ವಿಷಯ ಕೇಳಿ ಬಹಳಷ್ಟು ಬೇಸರವಾಗಿತ್ತು. ಇವತ್ತು ಅವರ ನಗು ನೋಡಿ ಸಮಾಧಾನ ಆಯ್ತು! ಯಾವಾಗ್ಲೂ ಹೇಳ್ತಿದ್ರು ನಮ್ ಸಿದ್ದರಾಮಣ್ಣ, ನೀನೊಬ್ನೆ ಕಣಯ್ಯಾ ಯಾವ ಲಾಭದ ನಿರೀಕ್ಷೆ ಇಲ್ಲದೇ ಬರ್ತೀಯಾ, ನಿನಗೆ ಒಳ್ಳೇದಾಯ್ತೆ…ನಡೆಯಪ್ಪ ಅಂದ್ರು…! ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಏನೂ ಸಮಸ್ಯೆ ಇಲ್ಲ ಆರೋಗ್ಯವಾಗಿದ್ದೇನೆ: ಸಿದ್ದರಾಮಯ್ಯ
ಈ ಮೊದಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮೊದಲಾದವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಸಿಎಂ ಬಿಎಸ್ವೈ ಆಗಮಿಸುತ್ತಿರುವುದನ್ನು ಕಂಡ ಕೂಡಲೇ ಅಚ್ಚರಿಗೊಂಡ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳು ಬಂದಿದ್ದಾರೆ. ಅವರಿಗೆ ಕುಳಿತುಕೊಳ್ಳಲು ಚೇರ್ ನೀಡಿ ಎಂದು ಹೇಳಿದ್ದರು. ಇದನ್ನೂ ಓದಿ: ಗಾಳಿ ಸುದ್ದಿಗೆ ಆತಂಕಪಡಬೇಡಿ, ಆರೋಗ್ಯವಾಗಿದ್ದೇನೆ: ಸಿದ್ದರಾಮಯ್ಯ
ಆಗಿದ್ದೇನು..?
ಬುಧವಾರ ಬೆಳಗ್ಗೆ 6:30 ಸುಮಾರಿಗೆ ಸಿದ್ದರಾಮಯ್ಯಗೆ ರಕ್ತದೊತ್ತಡ ಜಾಸ್ತಿಯಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಎದೆನೋವು ಕೂಡ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಅವರನ್ನು ನಗರದ ಮಲ್ಲೇಶ್ವರಂನಲ್ಲಿರುವ ವೇಗಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಪಚುನಾವಣೆಯ ಕಾಂಗ್ರೆಸ್ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ, 15 ಕ್ಷೇತ್ರಗಳಲ್ಲಿ 2 ಕ್ಷೇತ್ರದಲ್ಲಿ ಮಾತ್ರ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಉಪಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿದ್ದಕ್ಕೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ತಮ್ಮ ಸಿಎಲ್ಪಿ ನಾಯಕನ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಸಿಎಂ ಬಂದ್ರು ಚೇರ್ ಕೊಡ್ರಪ್ಪ: ಸಿದ್ದರಾಮಯ್ಯ