ಮೈಸೂರು: ಪ್ರಧಾನ ಮಂತ್ರಿಗಳು ಬಂದಾಗ ಮಾತ್ರ ರಸ್ತೆ ಸರಿ ಮಾಡುತ್ತೀರಾ. ನಮ್ಮ ಮಕ್ಕಳು ಒಳ್ಳೆಯ ರಸ್ತೆಯಲ್ಲಿ ಓಡಾಡಬಾರದಾ ಎಂದು ಕಳಪೆ ರಸ್ತೆ ಕಾಮಗಾರಿ ಆರೋಪ ಹೊತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ತೆರಿಗೆ ಹಣ ನಮ್ಮ ದುಡ್ಡು. ನಾನು ವರ್ಷಕ್ಕೆ 38 ಲಕ್ಷ ರೂ. ತೆರಿಗೆ ಕಟ್ಟುತ್ತೇನೆ. ಪ್ರಶ್ನಿಸುವುದು ನಮ್ಮ ಹಕ್ಕು. ಒಳ್ಳೆಯ ರಸ್ತೆಯಲ್ಲಿ ನಮ್ಮ ಮಕ್ಕಳು ಓಡಾಡಬಾರದಾ? ನಮ್ಮ ದುಡ್ಡಿನಲ್ಲಿ ಅವರು ಬದುಕೋದು. ಸಾರ್ವಜನಿಕರ ಹಣದಲ್ಲಿ ಬದುಕುವ ರಾಜಕಾರಣಿಗಳು ಬಂದಾಗ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡುತ್ತೀರಾ? ನಮಗಾಗಿ ಯಾಕೆ ಮಾಡಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ, ನಾಚಿಕೆಯಾಗಬೇಕು: ಜಗದೀಶ್ ಶೆಟ್ಟರ್
ಈ ಹಿಂದೆ ಪ್ರತಾಪ್ ಸಿಂಹ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಇದು ಸುದ್ದಿಯಾಗಿ ವೈರಲ್ ಆಯಿತು. ಬಳಿಕ ಅವರು ಸೋತು ಕ್ಷಮೆ ಕೇಳಿದರು. ಆದರೆ ಇದು ಮಾತ್ರ ಸುದ್ದಿ ಆಗಲಿಲ್ಲ ಎಂದು ಮಾತನಾಡಿದ್ದಾರೆ.
ಜಸ್ಟ್ ಆಸ್ಕಿಂಗ್ ಮೂಲಕ ಸದ್ದು ಮಾಡಿ ಈಗ ತೆರೆಮರೆಗೆ ಸರಿದಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಎಂದೂ ಯಾವತ್ತೂ ಪ್ರಗತಿಪರರು, ಚಿಂತಕರ ಪರವಾಗಿರುತ್ತೇನೆ. ನಾನು ಕಣ್ಣಿಗೆ ಕಾಣದೇ ನನ್ನ ಕೆಲಸಗಳನ್ನು ಮಾಡುತ್ತಿದ್ದೇನೆ. ಮೀಡಿಯಾ ಮುಂದೆ ಬಂದು ಹೇಳಬೇಕೆಂದೇನಿಲ್ಲ. ನಾನು ಬೇರೆ ಬೇರೆ ರಾಜ್ಯಗಳಲ್ಲಿ ಇರುತ್ತೇನೆ. ನನ್ನ ವೃತ್ತಿಯ ಜೊತೆಗೆ ಪ್ರಗತಿಪರ ಹೋರಾಟದಲ್ಲಿ ಸದಾ ಸಕ್ರಿಯವಾಗಿರುತ್ತೇನೆ. ಕಣ್ಣಿಗೆ ಕಾಣದೆಯೇ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶೂ ಹಾಕಿಕೊಂಡೆ ದಸರಾ ಗಜಪಡೆಗೆ ಪೂಜೆ ಸಲ್ಲಿಸಿದ ಸಚಿವ ಉಮೇಶ್ ಕತ್ತಿ