ಕರಾವಳಿ ಭಾಗದ ದೈವಗಳ (Daiva) ಬಗ್ಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಪ್ರಚಾರ ಸಿಗುತ್ತಿದೆ. ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ, ಅದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಅನೇಕರು ದೈವಗಳ ಹೊಸ ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ದೈವಗಳ ನಂಬಿಕೆ ಮತ್ತು ಅಪನಂಬಿಕೆಗಳ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ (Discussion) ನಡೆಯುತ್ತಿದೆ. ಈ ಚರ್ಚೆಗೆ ಕಾರಣವಾಗಿದ್ದು ನಟ ಕಿಶೋರ್ (Kishor) ಹಾಕಿರುವ ಪೋಸ್ಟ್ ಎನ್ನುವುದು ಗಮನಿಸಬೇಕಾದ ಅಂಶ.
ಇತ್ತೀಚೆಗಷ್ಟೇ ದೈವಗಳಿಗೆ ಅಪಮಾನ ಮಾಡಿದವರು ಹೇಗೆ ರಕ್ತಕಾರಿಕೊಂಡು ಸತ್ತರು ಎಂದು ತೋರಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇಂಥದ್ದೊಂದು ವಿಡಿಯೋ ನೋಡಿದ್ದ ಕಿಶೋರ್ ಅವರು, ನಂಬಿಕೆ ಮತ್ತು ಮೂಢನಂಬಿಕೆ ಕುರಿತಾಗಿ ಸುದೀರ್ಘ ಬರೆದು ಪೋಸ್ಟ್ ಮಾಡಿದ್ದರು. ಆ ಫೋಸ್ಟ್ ಕುರಿತಾಗಿಯೇ ಚರ್ಚೆ ನಡೆದಿದೆ. ಕಿಶೋರ್ ಹೇಳಿದ ಮಾತಿಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ನಂಬಿಕೆ ಮತ್ತು ಮೂಢನಂಬಿಕೆ ಬಗ್ಗೆ ಮಾತನಾಡಿದ ಕಿಶೋರ್, ತಾವೇ ನಟಿಸಿದ್ದ ಕಾಂತಾರ ಸಿನಿಮಾದಲ್ಲೂ ಅಂಥದ್ದೊಂದು ದೃಶ್ಯವಿದೆ. ಮೂಢನಂಬಿಕೆಯ ಬಗ್ಗೆ ಮಾತನಾಡುವವರು ಅದನ್ನು ಪ್ರಚೋದಿಸುವಂತಹ ಚಿತ್ರದಲ್ಲಿ ನಟಿಸಿದ್ದು ಯಾಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅವರವರ ನಂಬಿಕೆ ಬಗ್ಗೆ ಯಾರೂ ಮಾತನಾಡಬಾರದು. ಅದನ್ನು ಅವರ ಪಾಲಿಗೆ ಬಿಟ್ಟುಬಿಡಬೇಕು ಎಂದೂ ಸಲಹೆ ನೀಡಿದ್ದಾರೆ.
ಕಾಂತಾರ ಸಿನಿಮಾ ಬಂದ ನಂತರ ದೈವಗಳ ಬಗ್ಗೆ ರೀಲ್ಸ್ ಮಾಡಲಾಯಿತು. ಬೇರೆ ಬೇರೆ ಸನ್ನಿವೇಶಗಳಿಗೆ ಆ ಸಿನಿಮಾದ ದೃಶ್ಯಗಳನ್ನು ಹೋಲಿಸಲಾಯಿತು. ಹಾಗೆ ಮಾಡಬೇಡಿ ಎಂದು ಸ್ವತಃ ರಿಷಬ್ ಶೆಟ್ಟಿ (Rishabh Shetty) ಅವರೇ ಕೇಳಿಕೊಂಡರೂ, ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಲೇ ಇವೆ. ಈ ಕಾರಣದಿಂದಾಗಿಯೇ ಕಿಶೋರ್ ಸುದೀರ್ಘ ಬರಹವೊಂದನ್ನು ಬರೆದರು, ಇದೀಗ ಆ ಬರಹದ ಬಗ್ಗೆಯೂ ಚರ್ಚೆ ಆಗುತ್ತಿದೆ.