ಬೆಂಗಳೂರು: ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರ ಮತ್ತು ತೆಲಂಗಾಣಗಳಲ್ಲೂ ಅಭಿಮಾನಿಗಳಿದ್ದಾರೆ.
ಸುದೀಪ್ ತಮಿಳು ಮತ್ತು ತೆಲುಗು ಭಾಷೆಯಲ್ಲೂ ಅಭಿನಯಿಸಿ ಅಭಿಮಾನ ಗಳಿಸಿದ್ದಾರೆ. ಸಾಮಾನ್ಯವಾಗಿ ಸುದೀಪ್ ಅವರ ಸಿನಿಮಾ ಬಂದಿಲ್ಲವೆಂದರೆ ಸ್ಯಾಂಡಲ್ ವುಡ್ ಅಭಿಮಾನಿಗಳು ಕಿಚ್ಚನನ್ನ ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ತೆಲುಗು ಫ್ಯಾನ್ಸ್ ಕೂಡ ಸುದೀಪ್ ಅವರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.
ತೆಲುಗು ಅಭಿಮಾನಿಯೊಬ್ಬ ಕಿಚ್ಚ ಅವರಿಗೆ ಟ್ವೀಟ್ ಮಾಡಿದ್ದು, “ಸುದೀಪ್ ಅಣ್ಣ ನಾನು ಆಂಧ್ರದವನು. ನಿಮ್ಮ ಸಿನಿಮಾಗಳನ್ನ ಹೆಚ್ಚು ಇಷ್ಟ ಪಡುತ್ತೀನಿ. ಅದರಲ್ಲೂ ‘ಹೆಬ್ಬುಲಿ’ ಅಂದರೆ ನನಗೆ ತುಂಬಾ ಇಷ್ಟ. ದಯವಿಟ್ಟು ತೆಲುಗು ಸಿನಿಮಾ ಮಾಡಿ. ನಾವು ನಿಮ್ಮನ್ನ ಮತ್ತು ನಿಮ್ಮ ಧ್ವನಿಯನ್ನ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂದು ಕೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ”ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಖಂಡಿತವಾಗಿಯೂ ತೆಲುಗು ಸಿನಿಮಾ ಮಾಡುತ್ತೇನೆ” ಎಂದು ಅಭಿಮಾನಿಯ ಮನವಿಗೆ ಉತ್ತರಿಸಿದ್ದಾರೆ.
ಸುದೀಪ್ ಎಸ್.ಎಸ್ ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರದ ಮೂಲಕ ತೆಲುಗು ಸಿನಿಮಾರಂಗ ಪ್ರವೇಶಿಸಿದ್ದರು. ನಂತರ ‘ಬಾಹುಬಲಿ ದಿ ಬಿಗಿನಿಂಗ್’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಕೋಟಿಗೊಬ್ಬ-2’ ಸಿನಿಮಾ ತೆಲುಗಿನಲ್ಲಿ ಡಬ್ಬಿಂಗ್ ಆಗಿ ಯಶಸ್ಸು ಕಂಡಿತ್ತು. ಈಗ ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರ ‘ಸೈರಾ ನರಸಿಂಹ ರೆಡ್ಡಿ’ಯಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ.