ದಾಸ ಪುರಂದರ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ದೀಪಕ್ ಸುಬ್ರಮಣ್ಯ (Deepak Subramanya) ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಆಗಮಿಸಿದ್ದಾರೆ. ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ (Saramsha) ಚಿತ್ರದ ಪ್ರಧಾನ ಪಾತ್ರವೊಂದರ ಮೂಲಕ ಮತ್ತೊಮ್ಮೆ ಹಿರಿತೆರೆ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿ, ತಾನು ಬಯಸಿದಂಥಾದ್ದೇ ಗುಣಲಕ್ಷಣಗಳನ್ನು ಹೊಂದಿರುವ ಪಾತ್ರ ಸಿಕ್ಕಿದ ಆತ್ಮತೃಪ್ತಿ ದೀಪಕ್ ರದ್ದು. ಧಾರಾರಾವಾಹಿಯಲ್ಲಿ ಒಂದಷ್ಟು ಪ್ರಸಿದ್ಧಿ ಪಡೆದುಕೊಂಡಿದ್ದ ದೀಪಕ್ ಈಗೊಂದಷ್ಟು ಕಾಲದಿಂದ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಆಯ್ಕೆಯ ವಿಚಾರದಲ್ಲೊಂದು ಗುಣಮಟ್ಟ ಕಾಯ್ದುಕೊಳ್ಳುವ ಗುಣ ಹೊಂದಿರೋ ದೀಪಕ್, ಅತ್ಯಂತ ಸಂತಸದಿಂದ ಒಪ್ಪಿಕೊಂಡಿರೋ ಚಿತ್ರ ಸಾರಾಂಶ.
ಟ್ರೈಲರ್ ನಲ್ಲಿ ದೀಪಕ್ ಸುಬ್ರಮಣ್ಯ ಪಾತ್ರದ ಒಂದಷ್ಟು ಚಹರೆಗಳು ತೆರೆದುಕೊಂಡಿವೆ. ಅದರ ಬಗ್ಗೆ ಮತ್ತೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಖುದ್ದು ದೀಪಕ್ ಹಂಚಿಕೊಂಡಿದ್ದಾರೆ. ಈ ಹಿಂದೆ ಅನೇಕ ಕಿರುಚಿತ್ರಗಳ ಮೂಲಕ ದೀಪಕ್ ಅವರಿಗೆ ಸೂರ್ಯ ವಸಿಷ್ಠರ (Surya Vasistha) ಪರಿಚಯವಾಗಿತ್ತು. ಆ ಸಂದರ್ಭದಲ್ಲಿಯೇ ಸೂರ್ಯರ ನಿರ್ದೇಶನದ ಕಸುವು, ಕಥನಕ್ಕೆ ದೃಷ್ಯರೂಪ ನೀಡುವ ಚಾಕಚಕ್ಯತೆ ದೀಪಕ್ ಗೆ ಹಿಡಿಸಿತ್ತು. ಆ ಕಾರಣದಿಂದಲೇ ಸೂರ್ಯ ಕಥೆ ಹೇಳಿ, ತನ್ನ ಪಾತ್ರದ ಬಗ್ಗೆ ವಿವರಿಸಿದಾಕ್ಷಣ ಅವರೊಳಗೊಂದು ಭರವಸೆ ಮೂಡಿಕೊಂಡಿತ್ತು. ಅದರ ಫಲವಾಗಿಯೇ ದೀಪಕ್ ಸಾರಾಂಶ ಚಿತ್ರದಲ್ಲಿ ತೇಜಸ್ವಿ ಪಂಡಿತ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ.
ದೀಪಕ್ ಹಂಚಿಕೊಂಡಿರುವ ಒಂದಷ್ಟು ವಿಚಾರಗಳನ್ವಯ ಹೇಳೋದಾದರೆ, ಈ ಪಾತ್ರ ನಿಜಕ್ಕೂ ವಿಶೇಷವಾಗಿದೆ. ಅದು ಸಿಎ ಪ್ರೊಫೆಷನ್ನಿನ ಪಾತ್ರ. ಜನರ ನಡುವಿದ್ದರೂ ಅಂತರ್ಮುಖಿ ಗುಣ ಹೊಂದಿರುವ ಪಾತ್ರವದು. ಸಾಮಾನ್ಯವಾಗಿ ತಮ್ಮ ಅಸಲೀ ಗುಣಕ್ಕೆ ವಿರುದ್ಧವಾದ ಪಾತ್ರಗಳನ್ನು ನಿರ್ವಹಿಕಸೋದೆಂದರೆ ಕಲಾವಿದರಾದವರಿಗೆ ಥ್ರಿಲ್ ಆಗುತ್ತೆ. ಅದಕ್ಕಾಗಿ ತಯಾರಿ ನಡೆಸೋದೇ ಒಂದು ಅನೂಹ್ಯ ಅನುಭವ. ಅಂಥಾದ್ದನ್ನೆಲ್ಲ ದೀಪಕ್ ಸುಬ್ರಮಣ್ಯ ಅಕ್ಷರಶಃ ಸಂಭ್ರಮಿಸಿದ್ದಾರೆ. ಮೂಲತಃ ಮಾತಿನ ಮಲ್ಲನಂಥಾ ಗುಣ ಹೊಂದಿರೋ ದೀಪಕ್ ಪಾಲಿಗೆ ಅಂತರ್ಮುಖಿ ವರ್ತನೆ ಅಪರಿಚಿತ. ಅದನ್ನು ಆವಾಹಿಸಿಕೊಳ್ಳಲು ಬಹಳಷ್ಟು ತಯಾರಿ ಮಾಡಿಕೊಂಡಿದ್ದರಂತೆ. ಇನ್ನುಳಿದಂತೆ ಸಿಎ ಅನ್ನೋದು ಕೂತು ಮಾಡೋ ಕೆಲಸವಾದ್ದರಿಂದ ಅದಕ್ಕೆ ದೈಹಿಕವಾಗಿಯೂ ರೂಪಾಂತರವಾಗಬೇಕಿತ್ತು. ಅದಕ್ಕಾಗಿ ದೈಹಿಕ ಕಸರತ್ತು ನಡೆಸಿದ್ದ ದೀಪಕ್, ಅತ್ಯಂತ ಕಡಿಮೆ ಅವಧಿಯಲ್ಲಿ ಇಪ್ಪತ್ಮೂರು ಕೇಜಿಯಷ್ಟು ತೂಕ ಹೆಚ್ಚಿಸಿಕೊಂಡಿದ್ದರಂತೆ.
ಇದಲ್ಲದೇ ಸಿಎಗಳ ಬಾಡಿ ಲ್ಯಾಗ್ವೇಜ್ ಮತ್ತು ವರ್ತನೆಗಳನ್ನೂ ಅಭ್ಯಸಿಸಿಕೊಂಡು ಆ ಪಾತ್ರಕ್ಕೆ ಜೀವ ತುಂಬಿದ ತೃಪ್ತಿ ದೀಪಕ್ ಅವರಲ್ಲಿದೆ. ನಮ್ಮೊಳಗೆ ಆಗಾಗ ಊಟೆಯೊಡೆಯುತ್ತಾ, ಹೇಳಿಕೊಳ್ಳಲಾಗದ ಭಾವ ಸ್ಫರಿಸೋ ತಾಕಲಾಟಗಳನ್ನಿಲ್ಲಿ ಸೂರ್ಯ ವಸಿಷ್ಠ ಪಾತ್ರಗಳ ಮೂಲಕ ಮಾತಾಗಿಸಿದ್ದಾರಂತೆ. ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ, ತಮ್ಮದೇ ಅನ್ನಿಸುವ ಅದೆಷ್ಟೋ ವಿಚಾರಗಳು ಸಾರಾಂಶದಲ್ಲಿವೆ ಎಂಬುದು ದೀಪಕ್ ಭರವಸೆ. ಬ್ರಿಡ್ಜ್ ಮೂವಿ ಅಂತ ಕರೆಸಿಕೊಳ್ಳುವ ಲಕ್ಷಣ ಹೊಂದಿರುವ ಸಾರಾಂಶ ಬದುಕಿನ ಸೂಕ್ಷ್ಮ ಸಾರಗಳನ್ನು ಹಿಡಿದಿಟ್ಟುಕೊಂಡಿರುವ ಸಿನಿಮಾ. ಇಂಥಾ ಹೊಸತನಗಳನ್ನು ಒಳಗೊಂಡಿರುವ ಸಾರಾಂಶ ಎಲ್ಲ ವರ್ಗದ ಪ್ರೇಕ್ಷಕರಿಗೂ ಖಂಡಿತಾ ಹಿಡಿಸಲಿದೆ ಎಂಬ ಗಾಢ ನಂಬಿಕೆ ದೀಪಕ್ ಸುಬ್ರಮಣ್ಯರದ್ದು