ಮೈಸೂರು: ಕಾರ್ ಅಪಘಾತದಿಂದಾಗಿ ಗಾಯಗೊಂಡಿರುವ ದರ್ಶನ್ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ವೈದ್ಯರು ದರ್ಶನ್ ಮತ್ತು ದೇವರಾಜ್ ಅವರ ಎಕ್ಸ್ ರೇ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ.
ಕಾರ್ ಅಪಘಾತ ಸಂಭವಿಸಿದಾಗ ದರ್ಶನ್ ಅವರು ತಮ್ಮ ಬಲಗೈಯನ್ನು ಕಾರಿನ ಮುಂಭಾಗಕ್ಕೆ ಕೊಟ್ಟಿದ್ದಾರೆ. ಆಗ ಕೈಯಲ್ಲಿ ಹಾಕಿದ್ದ ಕಡಗ ಚುಚ್ಚಿ ಮೂಳೆ ಮುರಿದಿತ್ತು. ನಂತರ ಅವರನ್ನು ಮೈಸೂರಿನ ಹೊರವಲಯದಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಾ. ಅಜಯ್ ಹೆಗ್ಡೆ ಮತ್ತು ಡಾ, ಶಣೈ ಅವರು ದರ್ಶನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ದರ್ಶನ್ ಕೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ. ಈಗ ವೈದ್ಯರು ದರ್ಶನ್ ಮತ್ತು ದೇವರಾಜ್ ಅವರಿಗೆ ಪೆಟ್ಟಾಗಿದ್ದ ಕೈಗಳ ಎಕ್ಸ್ ರೇಯನ್ನು ಬಿಡುಗಡೆ ಮಾಡಿದ್ದಾರೆ. ಎಕ್ಸ್ ರೇಯಲ್ಲಿ ದರ್ಶನ್ ಅವರ ಬಲಗೈಯಲ್ಲಿ ಕಡಗ ಚುಚ್ಚಿ ಮೂಳೆ ಮುರಿದಿರುವುದನ್ನು ಕಾಣಬಹುದಾಗಿದೆ. ದೇವರಾಜ್ ಅವರ ಎಕ್ಸ್ ರೇಯಲ್ಲಿ ಎಡಗೈಯ ಎರಡು ಬೆರಳುಗಳ ಮುಂದೆ ಗಾಯವಾಗಿರುವುದನ್ನು ಕಾಣಬಹುದಾಗಿದೆ.
ಈ ಕುರಿತು ವೈದ್ಯ ಡಾ. ಉಪೇಂದ್ರ ಶಣೈ ಪ್ರತಿಕ್ರಿಯಿಸಿ, ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಈಗಾಗಲೇ ಶಸ್ತ್ರಚಿಕಿತ್ಸೆ ನಡೆದಿದ್ದು, ಯಾವುದೇ ಪ್ರಾಣಾಪಾಯವಿಲ್ಲ. ಶೀಘ್ರವೇ ಅವರನ್ನು ಶಸ್ತ್ರಚಿಕಿತ್ಸೆಯ ಬಳಿಕ ಐಸಿಯಗೆ ಸ್ಥಳಾಂತರಿಸಲಾಗುತ್ತದೆ. ಒಂದು ದಿನ ಆಸ್ಪತ್ರೆಯಲ್ಲೇ ಅವರು ವಿಶ್ರಾಂತಿ ಪಡೆಯಲಿದ್ದು, ಆರೋಗ್ಯ ಸುಧಾರಿಸಿದ ಮೇಲೆ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv