ಚಿಕ್ಕೋಡಿ: ಸಿಎಂ ಬಸವರಾಜ ಬೊಮ್ಮಾಯಿ ಕಾಮನ್ ಸಿಎಂ ಅಲ್ಲ. ಕಮ್ಯುನಲ್ ಸಿಎಂ ಎಂದು ಬಿಜೆಪಿ ವಿರುದ್ಧ ನಟ ಚೇತನ್ ಅಹಿಂಸಾ ವಿರೋಧ ವ್ಯಕ್ತಪಡಿಸಿದರು.
ಭೀಮಾ ಕೋರಗಾಂವ್ ವಿಜಯೋತ್ಸವ ಹಾಗೂ ಸಾವಿತ್ರಿಭಾಯಿ ಫುಲೆ ಜಯಂತಿ ಅಂಗವಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ ಜಾಗೃತಿ ವೇದಿಕೆ ಹಾಗೂ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಸಮಾವೇಶ ಜರುಗಿತು. ಈ ಸಮಾರಂಭ ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿರುವ ಹಳೆ ತಹಶಿಲ್ದಾರ್ ಕಚೇರಿ ಆವರಣದಲ್ಲಿ ಜರುಗಿತು. ಸಮಾರಂಭದ ದಿವ್ಯ ಸಾನಿಧ್ಯವನ್ನ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಗಳು ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಚೇತನ್ ಅಹಿಂಸಾ ಅವರು ಆಗಮಿಸಿದ್ದರು. ಇದನ್ನೂ ಓದಿ: ಆ್ಯಪ್ನಲ್ಲಿ ಮಹಿಳೆಯರ ಮಾರಾಟ – ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ವಶಕ್ಕೆ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಬ್ರಾಹ್ಮಣ ಸಭಾದವರು ನಮ್ಮ ವಾಕ್ ಸ್ವಾತಂತ್ರ ಕಿತ್ತುವ ಹುನ್ನಾರ ನಡೆಸಿದ್ದಾರೆ. ಅಂಬೇಡ್ಕರ್, ಪೆರಿಯಾರ್ ಬ್ರಾಹ್ಮಣ್ಯವನ್ನ ವಿರೋಧ ಮಾಡಿದ್ದಾರೆ. ನಾನು ವಿರೋಧ ಮಾಡಿದ್ದಕ್ಕೆ ನನ್ನನ್ನು ಪೊಲೀಸ್ ಠಾಣೆ ಮೆಟ್ಟಿಲು ಏರಿಸಿದ್ದಾರೆ ಎಂದು ಕಿಡಿಕಾರಿದರು.
ಹಂಸಲೇಖ ಅವರು ಸೇರಿದಂತೆ ಎಲ್ಲರ ವಾಕ್ ಸ್ವಾತಂತ್ರ ಉಳಿಸಿಕೊಳ್ಳುವದು ನಮ್ಮ ಕರ್ತವ್ಯ ಎಂದರು. ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವಥ ನಾರಾಯಣ್ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು, ವಿಚಾರಗಳ ಚಕಮಕಿ ಇರಬೇಕು ದೈಹಿಕ ಹಲ್ಲೆಯನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವಿಚಾರಧಾರೆಯಲ್ಲಿ ಸಮಾನತೆಯ ಸಮಾಜದ ಬಗ್ಗೆ ವಿಚಾರ ಮಾಡಬೇಕಿದೆ ಎಂದು ತಿಳಿಸಿದರು.
ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ಒಂದೇ. ಪ್ರಜಾಪ್ರಭುತ್ವವನ್ನು ಎರಡು ಪಕ್ಷಗಳು ಮುಂದುವರೆಸುತ್ತಿಲ್ಲ. ರಾಜ್ಯದ ಸಿಎಂ ಕಾಮನ್ ಸಿಎಂ ಅಲ್ಲ ಅವರೊಬ್ಬರು ಕಮ್ಯುನಲ್ ಸಿಎಂ. ಮತಾಂತರ ವಿರೋಧಿ ಕಾಯ್ದೆ ಸಂವಿಧಾನ ವಿರೋಧಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: 33 ವರ್ಷದ ನಂತರ ಹುಟ್ಟೂರಿನ ನಕ್ಷೆ ಬಿಡಿಸಿ ತಾಯಿ ಮಡಿಲು ಸೇರಿದ ಮಗ!
ಈ ವೇಳೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಸಚಿವರಾದ ಎ.ಬಿ.ಪಾಟೀಲ್, ಶಶಿಕಾಂತ್ ನಾಯಿಕ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ್ ಹೊಸಮನಿ, ಮುಖಂಡರಾದ ಮಲ್ಲಿಕಾರ್ಜುನ್ ರಾಶಿಂಗೆ, ಮಲ್ಲೇಶ್ ಚೌಗಲಾ, ಮಹಾವೀರ ಮೋಹಿತೆ ಸೇರಿದಂತೆ ಇತರರು ಉಪಸ್ಥಿತರಿದ್ದರು.