ಬೆಂಗಳೂರು: ಎಲ್ಲಡೆ ನಟಿ ಶೃತಿ ಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ಅವರ ಮೀಟೂ ವಿವಾದ ಸುದ್ದಿಯಾಗುತ್ತಿದೆ. ಈಗ ನಟ ಚೇತನ್ ಹಣದ ಕಾರಣದಿಂದ ಶೃತಿ ಹರಿಹರನ್ ಬೆನ್ನಿಗೆ ನಿಂತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
10 ಲಕ್ಷ ರೂ. ಹಣದ ವಿಚಾರವಾಗಿ ನಟ ಚೇತನ್ ಅರ್ಜುನ್ ಶೃತಿ ಹರಿಹರನ್ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಅರ್ಜುನ್ ಸರ್ಜಾ ಸ್ನೇಹಿತ ಪ್ರಶಾಂತ್ ಸಂಬರ್ಗಿ ಅವರು ಆರೋಪ ಮಾಡಿದ್ದಾರೆ.
ಏನಿದು ಆರೋಪ?
ಅರ್ಜುನ್ ಸರ್ಜಾ ಪುತ್ರಿಯ ‘ಪ್ರೇಮಬರಹ’ ಚಿತ್ರಕ್ಕೆ ನಟ ಚೇತನ್ ಆಯ್ಕೆಯಾಗಿದ್ದರು. ಈ ವೇಳೆ ಮುಂಗಡವಾಗಿ 10 ಲಕ್ಷ ರೂ. ಹಣವನ್ನು ಕೂಡ ಪಡೆದುಕೊಂಡಿದ್ದರು. ಆದರೆ ವರ್ಕ್ ಶಾಪ್ ವೇಳೆ ಚೇತನ್ ನಟನೆ ಇಷ್ಟವಾಗದೇ ಇದ್ದಾಗ ಅರ್ಜುನ್ ಸರ್ಜಾ ಬೇರೆ ನಟನನ್ನು ಹಾಕಿಕೊಂಡು ಸಿನಿಮಾ ಮಾಡಿದ್ದರು. ಮುಂಗಡ ಹಣವನ್ನು ನೀಡುವಂತೆ ಅರ್ಜುನ್ ಸರ್ಜಾ ಕೇಳಿದ್ದರೂ ಚೇತನ್ ಹಣ ಮರು ಪಾವತಿ ಮಾಡಿರಲಿಲ್ಲ. ಹೀಗಾಗಿ 10 ಲಕ್ಷ ರೂ. ವಾಪಸ್ ಕೊಡುವಂತೆ ಲೀಗಲ್ ನೋಟಿಸ್ ಕೂಡ ರವಾನೆ ಮಾಡಲಾಗಿತ್ತು. ಈ ನೋಟಿಸ್ಗೆ ಪ್ರತೀಕಾರವಾಗಿ ಈಗ ಸೇಡು ತೀರಿಸಿಕೊಳ್ಳಲು 10 ಲಕ್ಷ ರೂ. ಹಣಕ್ಕಾಗಿ ನಟ ಅರ್ಜುನ್ ಸರ್ಜಾ ವಿರುದ್ಧ ಚೇತನ್ ನಿಂತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಪ್ರಶಾಂತ್ ಸಂಬರ್ಗಿ ಅವರು, ಚೇತನ್ ನಟನೂ ಅಲ್ಲ, ರಾಜಕರಣೀಯೂ ಅಲ್ಲ ಮತ್ತು ಸಾಮಾಜಿಕ ಕಾರ್ಯಕರ್ತನೂ ಅಲ್ಲ. 2018 ರಲ್ಲಿ ಅರ್ಜುನ್ ಸರ್ಜಾ ಅವರ ಮಗಳ ಅಭಿನಯದ ಸಿನಿಮಾವಾದ ‘ಪ್ರೇಮಬರಹ’ ರಿಲೀಸ್ ಆಗಿತ್ತು. 2017ರಲ್ಲಿ ನಾಯಕ ನಟಗಾಗಿ ಹುಡುಕಾಟ ನಡೆಸುತ್ತಿದ್ದೇವು. ಆಗ ಚೇತನ್ ಆಡಿಷನ್ ಮಾಡಿ, ಬಳಿಕ ನಿಮಗೆ ತಿಳಿಸುತ್ತೇವೆ ಎಂದು ಹೇಳಿದೆವು. ಆ ಸಮಯದಲ್ಲಿ ಆರ್ಥಿಕ ಸಮಸ್ಯೆ ಇದೆ ಎಂದು ಹೇಳಿ ಮುಂಗಡವಾಗಿ ಹಣ ನೀಡಿ ಎಂದು ಚೇತನ್ ಕೇಳಿಕೊಂಡಿದ್ದರು. ಹೀಗಾಗಿ ಅರ್ಜುನ್ ಸರ್ಜಾ ಅವರು 10 ಲಕ್ಷ ರೂ. ನೀಡಿದ್ದರು. ಆದರೆ ಚಿತ್ರೀಕರಣ ವೇಳೆ ಚೇತನ್ ಗೆ ಡೈಲಾಗ್ ಸರಿಯಾಗಿ ಹೇಳುವುದಕ್ಕೆ ಬಾರದ ಕಾರಣ ಅವರನ್ನು ಕೈಬಿಟ್ಟಿದ್ದೇವು. ಬಳಿಕ ಅವರ ಬದಲಿಗೆ ನಟ ಚಂದನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲಾಯಿತು ಎಂದು ಹೇಳಿದ್ದಾರೆ.
ಮೂರು ತಿಂಗಳಿಂದ ಹಣ ವಾಪಸ್ ಕೊಡುವಂತೆ ನೋಟಿಸ್ ಕಳುಹಿಸಿದ್ದೇವು. ಈ ವೇಳೆ ನನ್ನನ್ನು ಬಿಟ್ಟು ಸಿನಿಮಾ ಮಾಡಿದ್ದೀಯಾ, ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಮೆಸೇಜ್ ಮಾಡಿದ್ದರು. ಇದೇ ಒಂದು ಕಾರಣ ಇಟ್ಟುಕೊಂಡು ಗಂಜಿ ಕೇಂದ್ರದ ಪ್ರಕಾಶ್ ರೈ ಸೇರಿದಂತೆ ಇನ್ನಿತರ ಜೊತೆ ಸೇರಿ ಅರ್ಜುನ್ ಸರ್ಜಾ ವಿರುದ್ಧ ಮಾತನಾಡಬೇಕು ಎಂದು ಅವರ ಗುಂಪಿಗೆ ಸೇರಿದ್ದಾರೆ ಎಂದು ಪ್ರಶಾಂತ್ ಸಂಬರ್ಗಿ ಅವರು ಆರೋಪ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv