ನವದೆಹಲಿ: ಪ್ರಸ್ತುತ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿನಯ್ ಕುಮಾರ್ ಸಕ್ಸೇನಾ (VK Saxena) 2001ರಲ್ಲಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಹಾಗೂ ಹೋರಾಟಗಾರ್ತಿ (Narmada Bachao Andolan) ಮೇಧಾ ಪಾಟ್ಕರ್ (Medha Patkar) ಅವರಿಗೆ ದೆಹಲಿ ಕೋರ್ಟ್ 5 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ತೀರ್ಪಿನಲ್ಲಿ ವಿ.ಕೆ ಸಕ್ಸೇನಾ ಅವರಿಗೆ 10 ಲಕ್ಷ ರೂ. ಪಾವತಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಅಲ್ಲದೇ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೇಧಾ ಪಾಟ್ಕರ್ ಅವರ ಶಿಕ್ಷೆಯನ್ನು ಆಗಸ್ಟ್ 1 ರವರೆಗೆ ತಡೆ ಹಿಡಿಯಲಾಗಿದೆ. ಇದನ್ನೂ ಓದಿ: ಮಾನನಷ್ಟ ಕೇಸ್- ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ
ಷರತ್ತಿನ ಮೇಲೆ ತನ್ನನ್ನು ಬಿಡುಗಡೆ ಮಾಡಬೇಕೆಂಬ ಪಾಟ್ಕರ್ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, `ವಯಸ್ಸು ಮತ್ತು ಅನಾರೋಗ್ಯವನ್ನು ಪರಿಗಣಿಸಿ, ಹೆಚ್ಚಿನ ಶಿಕ್ಷೆ ನೀಡಲು ಭಯಸುವುದಿಲ್ಲ’ ಎಂದಿದೆ. ಕಳೆದ ಮೇ.24ರಂದು ಸಾಕೇತ್ ನ್ಯಾಯಾಲಯ ಮಾನನಷ್ಟದ ಅಪರಾಧಕ್ಕಾಗಿ ಪಾಟ್ಕರ್ ಅವರನ್ನು ದೋಷಿ ಘೋಷಿಸಿತ್ತು.
ನ್ಯಾಯಾಲಯದ ಆದೇಶದ ಕುರಿತು ಪ್ರತಿಕ್ರಿಯಿಸಿದ ಪಾಟ್ಕರ್, `ಸತ್ಯವನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ನಾವು ಯಾರನ್ನೂ ದೂಷಿಸಲು ಪ್ರಯತ್ನಿಸಿಲ್ಲ. ನಾವು ನಮ್ಮ ಕೆಲಸವನ್ನು ಮಾತ್ರ ಮಾಡುತ್ತೇವೆ. ನಾನು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುತ್ತೇನೆ’ ಎಂದು ಹೇಳಿದ್ದಾರೆ.
2000ರ ನವೆಂಬರ್ 25 ರಂದು ಪಾಟ್ಕರ್ ಅವರು ನೀಡಿದ್ದ ಪತ್ರಿಕಾ ಪ್ರಕಟಣೆಯ ವಿರುದ್ಧ 2001ರಲ್ಲಿ ಸಕ್ಸೇನಾ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಆಗ ಅವರು ಅಹಮದಾಬಾದ್ ಮೂಲದ ಎನ್ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್ನ ಮುಖ್ಯಸ್ಥರಾಗಿದ್ದರು. ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿಎಂ ಪುತ್ರ ಯತೀಂದ್ರ ಪಾತ್ರ ಇದೆಯಾ? – ಸಚಿವ ಬೈರತಿ ಸುರೇಶ್ ಹೇಳಿದ್ದೇನು?