ಶಿವಮೊಗ್ಗ: ಇಲ್ಲಿನ ಟಿಪ್ಪು ನಗರದಲ್ಲಿ ಮೌಲ್ವಿಯೊಬ್ಬರ ಮೇಲೆ ಸಂಘಟನೆಯೊಂದರ ಕಾರ್ಯಕರ್ತರು ಮಂಗಳವಾರ ರಾತ್ರಿ ದಾಳಿ ಮಾಡಿದ್ದಾರೆ. ಟಿಪ್ಪು ನಗರದಲ್ಲಿನ ಖುಬಾ ಮಸೀದಿ ಮೌಲ್ವಿ ಮಹ್ಮದ್ ತೌಖೀರ್ ರಝಾ ಹಲ್ಲೆಗೆ ಒಳಗಾದ ಮೌಲ್ವಿ.
ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ದೂರು ನೀಡಲು ಹೋದಾಗ ಜಿಯಾವುಲ್ಲಾ ಎಂಬವರ ಮೇಲೂ ಈ ಗುಂಪು ಹಲ್ಲೆ ಮಾಡಿದೆ. ಹೊರಗಡೆ ಬನ್ನಿ ಎಂದು ಮಸೀದಿಯಿಂದ ಕರೆಸಿಕೊಂಡು ನಡು ರಸ್ತೆಯಲ್ಲೇ ಓಡಾಡಿಸಿಕೊಂಡು ರಾಡು, ದೊಣ್ಣೆ ಇತರೆ ಆಯುಧಗಳಿಂದ ಹಲ್ಲೆ ಮಾಡಲಾಗಿದೆ. ಗಾಯಾಳು ಮೌಲ್ವಿ ಹಾಗೂ ಜಿಯಾವುಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿವಮೊಗ್ಗ ಎಂಎಲ್ಎ ಪ್ರಸನ್ನ ಕುಮಾರ್ ಅವರ ಬೆಂಬಲದಿಂದ ಎಸ್ ಕೆಪಿ ಎಂಬ ಸಂಸ್ಥೆಯ ಅನ್ವರ್ ಎಂಬಾತ ಈ ಕೃತ್ಯ ಮಾಡಿಸಿದ್ದಾನೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ಇರುವ ಮದರಸಾಗಳು ಹಾಗೂ ಮಸೀದಿಗಳ ಮೇಲೆ ಹಿಡಿತ ಸಾಧಿಸಲು ಅನ್ವರ್ ಇಂಥ ಕೃತ್ಯಕ್ಕೆ ಕೈ ಹಾಕಿದ್ದಾನೆ. ಕುರಾನ್, ಷರಿಯತ್ ಗೆ ಮಾತ್ರ ಅನುಸರಿಸುವ ಸುನ್ನಿ ಪಂಗಡದಲ್ಲಿ ಬಾಬಾಗಳ ಬಗ್ಗೆಯೂ ಹೇಳುವಂತೆ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದಿರಲಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಇಂದು ಮೌಲ್ವಿ ಮಹ್ಮದ್ ತೌಖೀರ್ ಅವರ ಮೇಲೆ ಹಲ್ಲೆ ನಡೆದಿದೆ ಎಂಬುದಾಗಿ ತಿಳಿದಬಂದಿದೆ.
ಈ ಹಲ್ಲೆ ಖಂಡಿಸಿ ಇಂದು ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿವೆ.