ಬೆಂಗಳೂರು: ನಗರದಲ್ಲಿ ಹಾಡಹಗಲೇ ಯುವತಿಯ ಮೇಲೆ ಆಸಿಡ್ ದಾಳಿ ಮಾಡಲು ಯತ್ನಿಸಿರುವ ಘಟನೆ ಪೀಣ್ಯಾ 2ನೇ ಹಂತದ ಪ್ರದೇಶದಲ್ಲಿ ನಡೆದಿದೆ.
ಚಂದನ್ ಎಂಬ ಯುವಕ ಯುವತಿಯೊಬ್ಬಳ ಮೇಲೆ ಆಸಿಡ್ ದಾಳಿಯನ್ನು ಮಾಡಲು ಯತ್ನಿಸಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಚಂದನ್ ಹಲವು ದಿನಗಳಿಂದ ಯುವತಿಯೊಬ್ಬಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಅಲ್ಲದೇ ತನ್ನನ್ನು ಮದುವೆಯಾಗಲು ಒಪ್ಪದೇ ಇದ್ದರೆ ಆಸಿಡ್ ಹಾಕುವುದಾಗಿ ಬೆದರಿಕೆಯನ್ನು ಹಾಕಿದ್ದ. ಆದರೆ ಯುವತಿ ಚಂದನ್ನನ್ನು ಮದುವೆಯಾಗಲು ನಿರಾಕರಿಸಿದ್ದಳು.
ತನ್ನ ಕೋರಿಕೆಯನ್ನು ನಿರಾಕರಿಸಿದ ಕಾರಣ ಚಂದನ್ ಕೋಪಗೊಂಡು ಇಂದು ಏಕಾಏಕಿ ಯುವತಿಯ ಮೇಲೆ ಆಸಿಡ್ ನಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ಆದರೆ ಸ್ಥಳದಲ್ಲಿದ್ದ ಸಾರ್ವಜನಿಕರು ಸಮಯ ಪ್ರಜ್ಞೆ ಪ್ರದರ್ಶಿಸಿ ಯುವತಿಯನ್ನು ರಕ್ಷಿಸಿದ್ದಾರೆ. ನಂತರ ಚಂದನ್ನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಸಾರ್ವಜನಿಕರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಚಂದನ್ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.