ಲಕ್ನೋ: ಕಳೆದ ತಿಂಗಳು ರೈಲಿನಲ್ಲಿ ಮಹಿಳಾ ಕಾನ್ಸ್ಟೆಬಲ್ (Woman Constable) ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ (Uttar Pradesh) ಪತ್ತೆ ಹಚ್ಚಿ ಎನ್ಕೌಂಟರ್ನಲ್ಲಿ (Encounter) ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಆತನ ಇಬ್ಬರು ಸಹಾಯಕರು ಗಾಯಗೊಂಡಿದ್ದು, ಇದೀಗ ಅವರನ್ನು ಬಂಧಿಸಲಾಗಿದೆ. ಕಳೆದ ತಿಂಗಳು ಅಯೋಧ್ಯೆಯ (Ayodhya) ಬಳಿ ಸರಯು ಎಕ್ಸ್ಪ್ರೆಸ್ನಲ್ಲಿ ರಕ್ತದ ಮಡುವಿನಲ್ಲಿ ಕಾನ್ಸ್ಟೆಬಲ್ ಮುಖ ಮತ್ತು ತಲೆಗೆ ಗಾಯಗಳಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಈಗ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾಳಿಯ ಪ್ರಮುಖ ಆರೋಪಿ ಅನೀಸ್ ಖಾನ್ ನನ್ನು ಪೊಲೀಸರು ಬಂಧಿಸಲು ಹೋಗಿದ್ದರು. ಈ ವೇಳೆ ಎನ್ಕೌಂಟರ್ ನಡೆಸಿದಾಗ ಆರೋಪಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಆತ ಸಾವನ್ನಪ್ಪಿದ್ದಾನೆ. ಆತನ ಸಹಾಯಕರಾದ ಆಜಾದ್ ಮತ್ತು ವಿಷಂಭರ್ ದಯಾಳ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲಾ ವಾಹನ ನಿಲ್ಲಿಸಿ, ಗನ್ ಝಳಪಿಸಿ ರೀಲ್ಸ್ ಮಾಡಿದ ಪುಂಡರು!
ಮಹಿಳಾ ಪೊಲೀಸ್ ಮೇಲೆ ದಾಳಿ ನಡೆಸಿದ ಘಟನೆ ಬಳಿಕ ಸಂತ್ರಸ್ತೆ ಗುರುತಿಸಿದ ಫೋಟೋವನ್ನು ಆಧರಿಸಿ ನಾವು ಆರೋಪಿಯನ್ನು ಗುರುತಿಸಿ, ಪತ್ತೆಹಚ್ಚಿದ್ದೇವೆ. ಇದರ ಆಧಾರದ ಮೇಲೆ ಆಯೋಧ್ಯೆ ಪೊಲೀಸರು ಮತ್ತು ವಿಶೇಷ ಕಾರ್ಯಪಡೆ ಆರೋಪಿಯ ಮೇಲೆ ಎನ್ಕೌಂಟರ್ ನಡೆಸಿದ್ದಾಗಿ ಅಯೋಧ್ಯೆ ಹಿರಿಯ ಪೊಲೀಸ್ ಅಧೀಕ್ಷಕ ರಾಜ್ ಕರಣ್ ನಯ್ಯರ್ ತಿಳಿಸಿದ್ದಾರೆ.
ಆರೋಪಿಗಳು ತಪ್ಪಿಸಿಕೊಳ್ಳಲು ಮೊದಲು ತಮ್ಮ ಮೇಲೆ ಗುಂಡು ಹಾರಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಪೊಲೀಸರು ಎನ್ಕೌಂಟರ್ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದು ಅವರನ್ನು ಮೊದಲು ಬಂಧಿಸಲಾಗಿತ್ತು. ಮೂರನೇ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಸಲಾಗಿತ್ತು. ಆತ ಮತ್ತೆ ಸಿಕ್ಕಿ ಬಿದ್ದಾಗ ಪೊಲೀಸರಿಗೆ ಶರಣಾಗಲು ತಿಳಿಸಲಾಗಿತ್ತು. ಆದರೆ ಆತ ಮತ್ತೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದಾಗ ಆತನ ಮೇಲೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಕೊನೆಗೆ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ಭಾರತದ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು INDIA ಬಣ ಬಿಡಲ್ಲ: ರಾಹುಲ್ ಗಾಂಧಿ
ಕಾರ್ಯಾಚರಣೆ ವೇಳೆ ಒಬ್ಬ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ಆಗಸ್ಟ್ 30ರಂದು ರೈಲಿನ ಕಂಪಾರ್ಟ್ಮೆಂಟ್ನಲ್ಲಿ ಮಹಿಳಾ ಕಾನ್ಸ್ಟೆಬಲ್ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದರು. ಆಕೆಯ ಸಹೋದರ ಅದೇ ದಿನ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
Web Stories