ಅಗರ್ತಲಾ: ಶಾಪಿಂಗ್ ಮಾಡಲು ಮಾಲ್ಗೆ ಹೋಗಿದ್ದ ವೇಳೆ ಅಲ್ಲಿನ ಸಿಬ್ಬಂದಿ ನೀಡಿದ ಕಿರುಕುಳದಿಂದ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ತ್ರಿಪುರಾ ಬರ್ಕತಲ್ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕಿಯು ಅಕ್ಸಿಲಿಯಮ್ ಮಹಿಳಾ ಪ್ರೌಢ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದಳು. ಸಿಬ್ಬಂದಿ ಆಕೆಯನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದು, ಅವಮಾನ ಮಾಡಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ನನ್ನ ಮಗಳು ಯಾವುತ್ತೂ ಕಳ್ಳತನ ಮಾಡಿದವಳಲ್ಲ. ನನ್ನ ಅನುಮತಿ ಇಲ್ಲದೇ ಯಾವತ್ತೂ ಆಕೆ ನನ್ನ ಪರ್ಸ್ ಮುಟ್ಟುತ್ತಿರಲಿಲ್ಲ, ಅಲ್ಲದೇ ನೆರೆಹೊರೆಯವರಿಂದ ಏನನ್ನು ಪಡೆಯುತ್ತಿರಲಿಲ್ಲ. ಮಾಲ್ ಸಿಬ್ಬಂದಿ ಆಕೆಯ ಮೇಳೆ ಸುಳ್ಳು ಆರೋಪ ಹೊರಿಸಿದ್ದಾರೆ. ಸಾರ್ವಜನಿಕವಾಗಿ ಅಪಮಾನಕ್ಕೆ ಒಳದಾಗ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ತಾಯಿ ಒತ್ತಾಯಿಸಿದ್ದಾರೆ.
ನಡೆದಿದ್ದು ಏನು:
ಮೇ 24ರಂದು ಬಾಲಕಿ ತನ್ನ ಇಬ್ಬರು ಗೆಳತಿಯರೊಂದಿಗೆ ಶಾಪಿಂಗ್ ಮಾಡಲು ಮಾಲ್ಗೆ ಹೋಗಿದ್ದಾಳೆ. ಆಕೆಯನ್ನು ಮಾಲ್ ಸಿಬ್ಬಂದಿಯೊಬ್ಬ ಫೋನ್ ಕಳ್ಳತನದ ಆರೋಪದ ಮೇಲೆ ವಶಕ್ಕೆ ಪಡೆದು 4 ಸಾವಿರ ರೂ. ನೀಡಿ ಬಿಡಿಸಿಕೊಂಡು ಹೋಗುವಂತೆ ಹೇಳಿದ್ದಾನೆ. ವಿಚಾರ ತಿಳಿದು ಆಘಾತಕ್ಕೆ ಒಳಗಾದ ಅವರು ತಕ್ಷಣವೇ ಹೋಗಿ ಬಿಡಿಸಿಕೊಂಡು ಬಂದಿದ್ದಾರೆ. ಇದರಿಂದ ಮನನೊಂದು ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೊಲೀಸರು ಅಸ್ವಾಭಾವಿಕ ಸಾವು ಎಂದು ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಸದ್ಯ ಇಂಡಿಜಿನಸ್ ಪೀಪಲ್ಸ್ ಆಫ್ ತ್ರಿಪುರ (ಐಪಿಎಫ್ಟಿ) ಹಾಗೂ ನ್ಯಾಷನಲ್ ಸ್ಟುಡೆಂಟ್ ಯುನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ) ಮೌನ ಪ್ರತಿಭಟನೆಗೆ ಕರೆ ನೀಡಿದ್ದವು. ಆದರೆ ಪೊಲೀಸರು ಪ್ರತಿಭಟನೆಯನ್ನು ಮಾಡದಂತೆ ಸೂಚಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ಬಹಿರಂಗ ಪಡಿಸಬೇಕು. ಬಾಲಕಿಯ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಐಪಿಎಫ್ಟಿ ಸದಸ್ಯರು ಮಾಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಾಲ್ ಹಾಗೂ ಬಾಲಕಿ ಓದುತ್ತಿದ್ದ ಶಾಲೆಯವರು ಆತ್ಮಹತ್ಯೆ ಮಾಡಿಕೊಂಡ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ವರದಿಯಾಗಿದೆ.