ಬೆಂಗಳೂರು: ಕೇವಲ 50 ರೂ.ಗಾಗಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರದ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಬರಹಳ್ಳಿ ಸರ್ಕಲ್ ಬಳಿ ನಡೆದಿದೆ.
ಯುವಕ ಶಿವಮಾಧು(24)ನನ್ನು ಆತನ ಸ್ನೇಹಿತ ಶಾಂತಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಕೊಲೆಯಾದ ಶಿವಮಾಧು ಹಾಗೂ ಆರೋಪಿ ಶಾಂತಕುಮಾರ್ ಇಬ್ಬರೂ ಸ್ನೇಹಿತರು. ಚಿಕ್ಕಂದಿನಿಂದ ಆಡಿ ಬೆಳೆದವರು. ಕುರಬರಹಳ್ಳಿ ಸರ್ಕಲ್ ಬಳಿ ಹುಟ್ಟಿ ಬೆಳೆದವರು ಕೆಲ ವರ್ಷಗಳ ಹಿಂದೆ ಲಗ್ಗೆರೆ ಬ್ರಿಡ್ಜ್ ಬಳಿ ಶಿಫ್ಟ್ ಆಗಿದ್ದರು. ಆದರೂ ಹಳೆ ಅಡ್ಡ ಎಂದು ಆಗಾಗ ಕುರುಬರಹಳ್ಳಿ ಕಡೆ ಬರುತ್ತಿದ್ದರು. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಎರಡು ಹೆಣ – ಪ್ರೇಯಸಿ ಮಣ್ಣಲ್ಲಿ, ಪ್ರಿಯಕರ ಮರದ ಕೊಂಬೆಯಲ್ಲಿ
ಆರೋಪಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಮೃತ ಶಿವಮಾಧು ಆಟೋ ಡ್ರೈವರ್ ಆಗಿದ್ದ. ಎಂದಿನಂತೆ ಕುರಬರಹಳ್ಳಿ ಸರ್ಕಲ್ ಕಡೆ ಬಂದಿದ್ದ ಶಿವಮಾಧು, ಶಾಂತಕುಮಾರ್ ಮತ್ತು ಸ್ನೇಹಿತರು ಹತ್ತಿರದಲ್ಲೇ ಇದ್ದ ಗ್ರೌಂಡ್ಗೆ ಕ್ರಿಕೆಟ್ ಆಡಲು ಹೋಗಿದ್ದರು. ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆ ರಾತ್ರಿ 8:30ರ ಸುಮಾರಿಗೆ ಸರ್ಕಲ್ ಬಳಿ ಇರುವ ಸೈಬರ್ ಸೆಂಟರ್ಗೂ ಹೋಗಿದ್ದರು.
ಈ ವೇಳೆ ಶಾಂತಕುಮಾರ್ ಜೇಬಿನಿಂದ ಶಿವಮಾಧು 50 ರೂ. ತೆಗೆದಿದ್ದಾನೆ. ಯಾಕೋ 50 ರೂ. ತಗೊಂಡೆ? ವಾಪಸ್ ಕೊಡು ಎಂದು ಕೇಳಿದ್ದ ಶಾಂತಕುಮಾರ್ಗೆ ಶಿವಮಾಧು ಕೊಡಲ್ಲ ಎಂದಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಜೊತೆಯಲ್ಲೇ ತಂದಿದ್ದ ಚಾಕು ತೆಗೆದುಕೊಂಡು ಶಾಂತಕುಮಾರ್ ಶಿವಮಾಧು ಎದೆಗೆ ಚುಚ್ಚಿ ಎಸ್ಕೇಪ್ ಆಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವಮಾಧುನನ್ನು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೂ ಆತ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದ 5 ವಸತಿ ಗೃಹ ಜಪ್ತಿ
ಬಳಿಕ ಘಟನಾ ಸ್ಥಳಕ್ಕೆ ಬಂದ ಬಸವೇಶ್ವರ ನಗರ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಫುಟೇಜ್ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಯಾಕೆ ಚಾಕು ಇಟ್ಟುಕೊಂಡಿದ್ದ ಎಂಬ ಪ್ರಶ್ನೆ ಮೂಡಿದೆ. ಈ ರೀತಿ ಡೆಲಿವರಿ ಬಾಯ್ಗಳು ಚಾಕು ಇಟ್ಟುಕೊಂಡರೆ, ಊಟ ಆರ್ಡರ್ ಮಾಡುವವರಿಗೆ ಅದೆಷ್ಟು ಸೇಫ್ಟಿ ಇದೆ ಎಂಬ ಆತಂಕವೂ ಮೂಡುತ್ತಿದೆ. ಎಲ್ಲವೂ ತನಿಖೆ ಬಳಿಕವೇ ಹೊರ ಬರಬೇಕಿದೆ.