ಶ್ರೀನಗರ: ಇಲ್ಲಿಯವರೆಗೆ ಉಗ್ರರಿಗೆ ಬಿಸಿ ಮುಟ್ಟಿಸುತ್ತಿದ್ದ ಪೊಲೀಸರು ಈಗ ಜನರಿಗೂ ಬಿಸಿ ಮುಟ್ಟಿಸಲು ಆರಂಭಿಸಿದ್ದಾರೆ. ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದ ಶ್ರೀನಗರ 5 ವಸತಿ ಗೃಹವನ್ನು ಪೊಲೀಸರು ಪತ್ತೆ ಮಾಡಿ ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶ್ರೀನಗರ ಪೊಲೀಸರು ಭಯೋತ್ಪಾದಕರಿಗೆ ಆಶ್ರಯ ನೀಡಲು ಬಳಸಲಾಗಿದ್ದ ಐದು ವಸತಿ ಗೃಹಗಳ ಮೇಲೆ ದಾಳಿ ಮಾಡಿದ್ದಾರೆ. ನಂತರ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ(ಯುಎಪಿಎ) ಅಡಿ ಆ ಐದು ವಸತಿ ಗೃಹಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
2022 ಜೂನ್ 21ರಂದು, ಯುಎಪಿಎ ಸೆಕ್ಷನ್ 2(ಜಿ) ಮತ್ತು ಸೆಕ್ಷನ್ 25 ರ ಪ್ರಕಾರ ಭಯೋತ್ಪಾದಕರಿಗೆ ಆಶ್ರಯ ಕೊಡುತ್ತಿದ್ದ ಐದು ವಸತಿ ಮನೆಗಳನ್ನು ಜಪ್ತಿ ಮಾಡಲಾಗಿದೆ. ಈ ಮನೆಗಳನ್ನು ಭಯೋತ್ಪಾದನೆಯ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ಸಾಬೀತಾಗಿದೆ. ಈ ಮನೆಗಳಲ್ಲಿ ಉಗ್ರರಿಗೆ ಆಶ್ರಯವನ್ನು ಸ್ವಯಂಪ್ರೇರಣೆಯಿಂದ ಮತ್ತು ಉದ್ದೇಶಪೂರ್ವಕವಾಗಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ಉಳಿಸು ದೇವರೇ – ಶಿಲುಬೆ ಮುಂದೆ ಕಂದನನ್ನು ಮಲಗಿಸಿದ ದಂಪತಿ
ಪರಿಂಪೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆಗಳು ಸೇರಿ ನೌಹಟ್ಟಾ, ಪಂಥಾ ಚೌಕ್ ಮತ್ತು ಜಕುರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಮನೆಯನ್ನು ಜಪ್ತಿ ಮಾಡಲಾಗಿದೆ. ಅಂತಹ ಇನ್ನೂ ಕೆಲವು ಮನೆಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ.
ಭಯೋತ್ಪಾದಕರಿಗೆ ಆಶ್ರಯ ನೀಡದಂತೆ ನಾಗರಿಕರಿಗೆ ಮತ್ತೊಮ್ಮೆ ನಾವು ವಿನಂತಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ನಾಗರಿಕರು ನಮ್ಮ ಮಾತನ್ನು ಕೇಳಲು ವಿಫಲವಾದರೆ ನಾವು ಅವರ ಮನೆಗಳನ್ನು ಜಪ್ತಿ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
ಯಾವುದೇ ಮನೆಗೆ ಭಯೋತ್ಪಾದಕರು ಬಲವಂತವಾಗಿ ಪ್ರವೇಶಿಸಿದರೆ ತಕ್ಷಣವೇ ಅದನ್ನು ಪೊಲೀಸರ ಗಮನಕ್ಕೆ ತರಬೇಕು ಎಂದು ಸೂಚಿಸಿದ್ದಾರೆ.