ಬೆಂಗಳೂರು: ಮನೆಗೆ ಟಿಪ್ಪರ್ ಲಾರಿ ನುಗ್ಗಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೋಧನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಘು(26) ಮೃತ ದುರ್ದೈವಿ. ಇನ್ನೊಬ್ಬ ಆತನ ಸಂಬಂಧಿಯಾಗಿದ್ದು, ಆತನ ಗುರುತು ಪತ್ತೆಯಾಗಿಲ್ಲ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ 207ರ ಬೋಧನಹೊಸಹಳ್ಳಿಯಲ್ಲಿ ಸಿಮೆಂಟ್ ಡಸ್ಟ್ ತುಂಬಿದ್ದ ಟಿಪ್ಪರ್ ಲಾರಿ ಬರುತಿತ್ತು. ಆದರೆ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿರುವ ಮನೆಗೆ ನುಗ್ಗಿದೆ. ಪರಿಣಾಮ ಮನೆಯ ಛಾವಣಿ ಸಂಪೂರ್ಣ ಕುಸಿದಿದೆ.
ಮನೆ ಕುಸಿದಿದ್ದರಿಂದ ಮನೆಯಲ್ಲಿ ಮಲಗಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯಕ್ಕೆ ಅವಶೇಷಗಳ ಅಡಿ ಸಿಲುಕಿರುವ ಮೃತದೇಹಗಳನ್ನು ಕ್ರೇನ್ ಸಹಾಯದಿಂದ ಹೊರತೆಗೆಯಲಾಗಿದೆ. ಜೊತೆಗೆ ಟಿಪ್ಪರ್ ಲಾರಿ ತೆರವು ಕಾರ್ಯಾಚರಣೆ ಮಾಡಲಾಗಿದೆ.
ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ತಿರುಮಲ ಶೆಟ್ಟಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.