ಬೆಂಗಳೂರು: ನಗರದ ಮಡಿವಾಳ ಬಳಿಯ ಜಾನ್ ಸಿಗ್ನಲ್ ಬಳಿ ವೇಗವಾಗಿ ಬರುತ್ತಿದ್ದ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಫಯಾಜ್, ಸುಲ್ತಾನಾ ಮತ್ತು 5 ವರ್ಷದ ಅಬ್ದುಲ್ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಫಯಾಜ್ ಮತ್ತು ಸುಲ್ತಾನಾ ಶ್ರೀರಾಮಚಂದ್ರಪುರ ನಿವಾಸಿಗಳಾಗಿದ್ದು, ನಿನ್ನೆ ರಾತ್ರಿ ಸುಲ್ತಾನರ ತಾಯಿ ಮನೆಗೆ ತಮ್ಮ ಆ್ಯಕ್ಟಿವಾ ಗಾಡಿಯಲ್ಲಿ ಹೋಗುತ್ತಿದ್ದರು. ಆದರೆ ಸಿಗ್ನಲ್ ಬಳಿ ಬರುತ್ತಿದ್ದಂತೆ ಹಿಂಬದಿಯಿಂದ ಬರುತ್ತಿದ್ದ ಟ್ರಕ್ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾಗುತ್ತಿದ್ದಂತೆ ಕೆಳಗೆ ಬಿದ್ದ ಫ್ಯಾಮಿಲಿ ಮೇಲೆ ಟ್ರಕ್ನ ಹಿಂದಿನ ಚಕ್ರ ಹರಿದು ಫಯಾಜ್ ಮತ್ತು ಮಗ ಅಬ್ದುಲ್ ಸ್ಥಳದಲ್ಲೆ ಪ್ರಾಣ ಬಿಟ್ಟಿದ್ದಾರೆ.
ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಸುಲ್ತಾನಳರನ್ನು ಪಕ್ಕದಲ್ಲೆ ಇದ್ದ ಸೆಂಟ್ ಜಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ತೀವ್ರ ರಕ್ತಸಾವ್ರವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಸುಲ್ತಾನ ಕೂಡ ಪ್ರಾಣ ಬಿಟ್ಟಿದ್ದಾರೆ. ಇನ್ನು ಈ ಫಯಾಜ್ ಸಂಡೆ ಬಜಾರ್ ನಲ್ಲಿ ಬಟ್ಟೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ನಿನ್ನೆ ಮೊಮ್ಮಗ ಅಬ್ದುಲ್ ನನ್ನು ಅಜ್ಜಿ ನೋಡಬೇಕು ಅಂದಿದ್ದಕ್ಕೆ ಕುಟುಂಬ ಸಮೇತ ಮಡಿವಾಳದಲ್ಲಿರುವ ಅಜ್ಜಿ ಮನೆಗೆ ಬರುತ್ತಿದ್ದರು. ಆದರೆ ಟ್ರಕ್ ಚಾಲಕನ ಬೇಜವಬ್ದಾರಿ ಚಾಲನೆಗೆ ಮೂವರು ಮಸಣ ಸೇರಿದ್ದಾರೆ.
ಅಪಘಾತದ ಬಳಿಕ ಟ್ರಕ್ ಚಾಲಕ ಗಾಡಿ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಸ್ಥಳೀಯರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಟ್ರಕ್ ಅಲ್ಲೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿರೊಂಡಿರುವ ಮಡಿವಾಳ ಸಂಚಾರಿ ಪೊಲೀಸರು ಟ್ರಕ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.