ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಅವರ ಮಗ, ನಟ ಅಭಿಷೇಕ್ ಅಂಬರೀಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವೈಯಕ್ತಿಕವಾಗಿ ನಾವು ಟೀಕೆ ಮಾಡುತ್ತಿಲ್ಲ. ನಮ್ಮ ಕುಟುಂಬದ ಬಗ್ಗೆ ಅವ್ರು ಮಾತಾಡಿದ್ರೆ ನಾವು ಉತ್ತರ ಕೊಡ್ತೀವಿ ಎಂದು ನಿಖಿಲ್ಗೆ ತಿರುಗೇಟು ನೀಡಿದರು.
ಮದ್ದೂರಿನ ವೈದ್ಯನಾಥಪುರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಭಿಷೇಕ್, “ಪ್ರಚಾರ ಕಾರ್ಯ ಚೆನ್ನಾಗಿ ನಡೆಯುತ್ತಿದೆ. ಪ್ರತಿ ದಿನ ಜನರ ರೆಸ್ಪಾನ್ಸ್ ಚೆನ್ನಾಗಿ ನಡೆಯುತ್ತಿದೆ. ಬೇಸಿಗೆ ಇದ್ದರೂ ಸಹ ಜನರು ನಮ್ಮ ಮಾತುಗಳನ್ನು ಕೇಳುವುದ್ದಕ್ಕೆ ಕಾಯುತ್ತಿದ್ದಾರೆ. ನಾವು ಸ್ವಲ್ಪ ತಡವಾಗಿ ಬಂದರೂ ಅವರು ಬೇಸರ ಮಾಡಿಕೊಳ್ಳಲ್ಲ. 10-15 ನಿಮಿಷ ತಡವಾದರೂ ಜನರು ತುಂಬಾ ಪ್ರೀತಿಯಿಂದ ಸ್ವಾಗತ ಮಾಡುತ್ತಾರೆ” ಎಂದರು.
ನಾವೇನು ಟೀಕೆ ಟಿಪ್ಪಣಿಗಳನ್ನು ಮಾಡುತ್ತಿಲ್ಲ. ನಮ್ಮ ಅನಿಸಿಕೆ ಕೇಳಿದ್ದಾಗ ನಾವು ಪ್ರತಿಕ್ರಿಯಿಸುತ್ತೇವೆ ಹೊರತು ನಾವು ವೈಯಕ್ತಿಕ ಆರೋಪ, ಟೀಕೆ ಮಾಡುತ್ತಿಲ್ಲ. ನಮ್ಮ ಕುಟುಂಬದ ಬಗ್ಗೆ ಅವರು ಮಾತಾಡಿದರೆ ನಾವೂ ಉತ್ತರ ನೀಡುತ್ತೇವೆ ಅಷ್ಟೇ. ಯಾರಾದರೂ ಕುಟುಂಬದ ಬಗ್ಗೆ ಮಾತನಾಡಿದರೆ ಪ್ರತಿಕ್ರಿಯಿಸುವುದು ಸಹಜ ಎಂದರು.
ಯಶ್ ಬಾಡಿಗೆ ಮನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರ ಹೇಳಿಕೆ ಎಷ್ಟು ಸರಿಯೋ ತಪ್ಪೋ ಎಂಬುದು ಜನರು ತೀರ್ಮಾನ ಮಾಡುತ್ತಾರೆ. ಅದು ನಿಜನೋ ಸುಳ್ಳೋ ಗೊತ್ತಿಲ್ಲ. ನಮಗೆ, ಜೆಡಿಎಸ್ ಅಭ್ಯರ್ಥಿಗೆ ಬ್ಯಾಕ್ ಗ್ರೌಂಡ್ ಇದೆ. ಆದರೆ ದರ್ಶನ್, ಯಶ್ ಗೆ ಬ್ಯಾಕ್ ಗ್ರೌಂಡ್ ಇಲ್ಲ. ಅವರು ಝೀರೋದಿಂದ ತಮ್ಮ ದುಡಿಮೆಯಿಂದ ಬೆಳೆದು ಬಂದವರು. ಚಿತ್ರರಂಗದಲ್ಲಿ ಒಂದು ಹಂತಕ್ಕೆ ಬೆಳೆದವರ ಬಗ್ಗೆ ಮಾತನಾಡಬಹುದಾ ಎಂದು ಯೋಚಿಸಿ ಮಾತಾಡಲಿ ಎಂದು ನಿಖಿಲ್ ಕುಮಾರಸ್ವಾಮಿಗೆ ಅಭಿಷೇಕ್ ತಿರುಗೇಟು ನೀಡಿದರು.
ಕೀಳುಮಟ್ಟಕ್ಕೆ ಅವರು ಇಳಿಯಲಿ. ನಾವು ಇಳಿಯಲ್ಲ. ಅವರು ಯಾವ ಹಂತಕ್ಕಾದರೂ ಹೋಗಿ ಮಾತಾಡಲಿ. ನಾವು ಅವರ ಬಗ್ಗೆ ಎಲ್ಲೂ ಮಾತಾಡುತ್ತಿಲ್ಲ. ನಾವು ಜನರ ಪರವಾಗಿ ಬಂದಿದ್ದೇವೆ. ಜನರ ಜೊತೆ ಮಾತನಾಡಿ ಅವರ ಅಭಿಪ್ರಾಯ ಪಡೆಯುತ್ತಿದ್ದೇವೆ. ಅವರ ಬಗ್ಗೆ ನಾವು ಏಲ್ಲೂ ಮಾತನಾಡುತ್ತಿಲ್ಲ. ನಾವು ಯಾರ ಪರವಾಗಿಯೂ ಟೀಕೆ ಟಿಪ್ಪಣಿ ಮಾಡುತ್ತಿಲ್ಲ. ಅವರೇ ನಮ್ಮ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ.
ದರ್ಶನ್, ಯಶ್ ಹಾಗೂ ನಮ್ಮ ತಾಯಿ ಅವರಿಗೆ ಟಾರ್ಗೆಟ್ ಮಾಡದೇ ಅವರಿಗೆ ಮಾತನಾಡುವುದಕ್ಕೆ ಆಗಲ್ಲ. ದರ್ಶನ್, ಯಶ್ ಹಾಗೂ ನಮ್ಮ ತಾಯಿ ಅವರನ್ನು ಟೀಕೆ ಮಾಡದೇ ಅವರು ಪ್ರಚಾರ ಮಾಡಲ್ಲ ಎಂದು ಪ್ರತಿಕ್ರಿಯಿಸಿದರು. ಇನ್ನೂ ನಾಯ್ಡು ವರ್ಸಸ್ ಒಕ್ಕಲಿಗ ಬಗ್ಗೆ ಶಿವರಾಮೇಗೌಡರ ಹೇಳಿಕೆಗೆ ಅಭಿಷೇಕ್ ಶಿವರಾಮೇಗೌಡರ ಬಗ್ಗೆ ನಾನು ಮಾತಾಡಲ್ಲ. ಅವರ ಪಕ್ಷದ ಅಧ್ಯಕ್ಷರೇ ಶಿವರಾಮೇಗೌಡ ಹೇಳಿಕೆ ಸರಿ ಇಲ್ಲ ಎಂದು ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.