ನವದೆಹಲಿ: ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಗೆ ಅಡ್ಡಿ ಪಡಿಸಿದ ಪ್ರಕರಣ ಸಂಬಂಧ ದೆಹಲಿಯ ವಿಶೇಷ ನ್ಯಾಯಾಲಯವೂ ಆಮ್ ಆದ್ಮಿ ಪಕ್ಷದ ಶಾಸಕ ಮನೋಜ್ ಕುಮಾರ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಮನೋಜ್ ಕುಮಾರ್ ಪೂರ್ವ ದೆಹಲಿಯ ಕೊಂಡ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, 2013 ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ಮತದಾನ ಪ್ರಕ್ರಿಯೆಗೆ ಅಡ್ಡಿ ಪಡಿಸಿದ್ದರು. ಮತದಾನ ಕೇಂದ್ರವಾಗಿದ್ದ ಎಂಡಿಸಿ ಶಾಲೆ ಬಳಿ ಸುಮಾರು 50 ಕಾರ್ಯಕರ್ತರ ಜೊತೆ ಗೂಡಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಮತದಾತಕ್ಕೆ ಬಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಹೀಗಾಗಿ ಕಲ್ಯಾಣ್ಪುರಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಜೂನ್ 11 ರಂದು ಮನೋಜ್ ಕುಮಾರ್ ಅವರನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಐಪಿಸಿ ಸೆಕ್ಷನ್ 186 ಅಡಿಯಲ್ಲಿ ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸರ್ಕಾರಿ ಅಧಿಕಾರಿಯನ್ನು ತಡೆದಿದ್ದಕ್ಕೆ ಹಾಗೂ ಐಪಿಸಿ ಸೆಕ್ಷನ್ 131ರ ಜನರ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಮತಗಟ್ಟೆಗಳಲ್ಲಿ ಅಥವಾ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪ ಸಾಬೀತಾಗಿದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಮನೋಜ್ ಕುಮಾರ್ ಅವರಿಗೆ 3 ತಿಂಗಳ ಜೈಲು ಶಿಕ್ಷೆ ಜೊತೆಗೆ 10 ಸಾವಿರ ರೂ. ದಂಡ ವಿಧಿಸಿದೆ.
ಶಿಕ್ಷೆ ಘೋಷಿಸಿದ ನಂತರ ಮನೋಜ್ ಕುಮಾರ್ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿ 10 ಸಾವಿರ ರೂ. ಬಾಂಡ್ ಕಟ್ಟುವಂತೆ ಸೂಚಿಸಿದೆ.