ಗಾಂಧೀನಗರ: ಗುಜರಾತ್ನಲ್ಲಿ (Gujrat) ಬಿಜೆಪಿಯನ್ನು (BJP) ಸೋಲಿಸುವ ಸಲುವಾಗಿ ಆಮ್ ಆದ್ಮಿ ಪಕ್ಷದ (Aam Aadmi Party) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು, ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕ್ರೌಡ್ ಸೋರ್ಸಿಂಗ್ ಅಭಿಯಾನವನ್ನು (Crowdsourcing Campaign) ಪ್ರಾರಂಭಿಸಿದ್ದಾರೆ.
ನಿಮ್ಮ ಮುಖ್ಯಮಂತ್ರಿಯನ್ನು ನೀವೇ ಆರಿಸಿ ಎಂಬ ಅಭಿಯಾನಕ್ಕೆ ಭಾನುವಾರ ಅರವಿಂದ್ ಕೇಜ್ರಿವಾಲ್ ಅವರು ಚಾಲನೆ ನೀಡಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರು ಬದಲಾವಣೆ ಬಯಸುತ್ತಿದ್ದಾರೆ. ಹಣದುಬ್ಬರ, ನಿರುದ್ಯೋಗ ಸಮಸ್ಯೆಗಳಿಂದ ಪರಿಹಾರಕ್ಕಾಗಿ ಹಂಬಲಿಸುತ್ತಿದ್ದಾರೆ. ಜನರು ಒಂದು ವರ್ಷದ ಹಿಂದೆ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಅವರನ್ನು ಬದಲಾಯಿಸಿದರು. ನಂತರ ಅವರ ಬದಲಿಗೆ ಭೂಪೇಂದ್ರ ಪಟೇಲ್ (Bhupendra Patel) ಅವರನ್ನು ಏಕೆ ನೇಮಿಸಿದರು? ಇದರರ್ಥ ವಿಜಯ್ ರೂಪಾನಿ ಅವರಲ್ಲಿ ಏನಾದರೂ ತಪ್ಪಾಗಿದೆ ಅಂತ ಅರ್ಥವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪುನೀತ್ ರಾಜಕುಮಾರ್ ಸ್ಯಾಟ್ ಲೈಟ್ ವರ್ಕ್ ಸ್ಟೇಷನ್ ಉದ್ಘಾಟಿಸಿದ ಸಿಎಂ
2016, 2021ರಲ್ಲಿ ಸಿಎಂ ಆಗಿ ಯಾರನ್ನು ಮಾಡಬೇಕೆಂದು ಬಿಜೆಪಿ ಜನರನ್ನು ಕೇಳಲಿಲ್ಲ. ವಿಜಯ್ ರೂಪಾನಿಯನ್ನು (Vijay Rupani ) ಸಿಎಂ ಮಾಡಿದಾಗಲೂ ಜನ ಕೇಳಲಿಲ್ಲ. ಅವರನ್ನು ದೆಹಲಿಯಿಂದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂದು ಜನ ನಿರ್ಧರಿಸುತ್ತಾರೆ. ಆಮ್ ಆದ್ಮಿ ಪಕ್ಷ ಬಿಜೆಪಿಯಂತೆ ಮಾಡುವುದಿಲ್ಲ. ನೀವು ಯಾರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಬಯಸುತ್ತೀರಾ ಎಂದು ಸಾರ್ವಜನಿಕರನ್ನು ಕೇಳಿ ತೀರ್ಮಾನ ಮಾಡುತ್ತೇವೆ. ಪಂಜಾಬ್ನಲ್ಲಿ ಯಾರನ್ನು ಮುಖ್ಯಮಂತ್ರಿಯಾಗಬೇಕು ಎಂದು ನಾವು ಜನರನ್ನು ಕೇಳಿದ್ದೇವು, ಅದರ ಪ್ರಕಾರ ಜನರ ಅಪೇಕ್ಷೆಯಂತೆ ಭಗವಂತ್ ಮಾನ್ (Bhagwant Mann) ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ.
ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೇ ಆಗಿರಲಿ ಅವರೇ ಗುಜರಾತ್ನ ಮುಂದಿನ ಮುಖ್ಯಮಂತ್ರಿಯಾಗಿರುತ್ತಾರೆ. ಹಾಗಾಗಿ ಈಗ ನಿಮ್ಮ ಮುಖ್ಯಮಂತ್ರಿ ಯಾರಾಗಬೇಕು ಅಂತ ಹೇಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ
“ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ತಿಳಿಸಲು 6357000360 ಸಂಖ್ಯೆ ನೀಡುತ್ತಿದ್ದೇವೆ. ಈ ಸಂಖ್ಯೆಗೆ ನೀವು SMS ಅಥವಾ WhatsApp ಸಂದೇಶ ಕಳುಹಿಸಬಹುದು ಅಥವಾ ವಾಯ್ಸ್ ಮೇಸೆಜ್ ಅನ್ನು ಸಹ ಕಳುಹಿಸಬಹುದು. ಇಲ್ಲವಾದಲ್ಲಿ ನೀವು aapnocm@gmail.com ಗೆ ಇಮೇಲ್ ಕೂಡ ಮಾಡಬಹುದು. ಈ ನಾಲ್ಕು ಮಾರ್ಗಗಳ ಮೂಲಕ ಸಾರ್ವಜನಿಕರು ತಮ್ಮ ಆಯ್ಕೆಯ ಬಗ್ಗೆ ನಮಗೆ ತಿಳಿಸಬಹುದು ಎಂದು ಹೇಳಿದ್ದಾರೆ.