ಬೆಂಗಳೂರು: ಭಾರತದಲ್ಲಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಮಾಹಿತಿ ಹಕ್ಕು ಪರಿಣಾಮಕಾರಿಯಾದ ಅಸ್ತ್ರವಾಗಿದ್ದು ಇದು ಜನತಾ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಹರೀಶ್ ಕುಮಾರ್ (Dr.Harish Kumar) ಹೇಳಿದರು.
ರಾಜಾಜಿನಗರದ ಎಸ್.ನಿಜಲಿಂಗಪ್ಪ ಕಾಲೇಜಿನಲ್ಲಿ (S Nijalingappa College) ಏರ್ಪಡಿಸಿದ್ದ `ಮಾಹಿತಿ ಹಕ್ಕು ಕಾಯ್ದೆಯ ಮಹತ್ವ’ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಭಾರತದ ಪ್ರಜಾತಂತ್ರ ಸುಲಭವಾಗಿ ದಕ್ಕಿದ್ದಲ್ಲ ಅದರ ಹಿಂದೆ ಸುದೀರ್ಘ ಹೋರಾಟದ ಕಥಾನಕವೇ ಅಡಗಿದೆ ಎಂದರು. ಇದನ್ನೂ ಓದಿ: ಅಸ್ಸಾಂನಲ್ಲಿ ಇನ್ಮುಂದೆ ಅಸ್ಸಾಮಿ ಭಾಷೆಯಲ್ಲೇ ಸರ್ಕಾರಿ ಆದೇಶ, ಸುತ್ತೋಲೆ: ಸಿಎಂ ಹಿಮಂತ ಬಿಸ್ವ ಶರ್ಮಾ
ನಾವು ಪ್ರಜಾತಂತ್ರ ರೂಪಿಕೆಯ ಜೊತೆಯಲ್ಲಿಯೇ ಸಾಮಾಜಿಕ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವ ಮುಖಾಂತರ ಅತ್ಯಂತ ಕಟ್ಟ ಕಡೆಯ ಪ್ರಜೆಗೂ ಪ್ರಭುತ್ವವನ್ನು ಸಮಾನವಾಗಿ ಪ್ರಶ್ನಿಸುವ ಅವಕಾಶವನ್ನು ನೀಡಿದ್ದೇವೆ. ಜನತೆ ಮಾಹಿತಿ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಬಳಸಿ ಆಡಳಿತದ ಆಗು ಹೋಗುಗಳಲ್ಲಿ ಭಾಗವಹಿಸಿ ಪ್ರಜಾತಂತ್ರವನ್ನು ಗಟ್ಟಿಗೊಳಿಸಬೇಕು. ಇದರಲ್ಲಿ ವಿದ್ಯಾರ್ಥಿಗಳ ಹಾಗೂ ಯುವಜನರ ಪಾತ್ರ ಹೆಚ್ಚಿದೆ ಎಂದು ತಿಳಿಸಿದರು.