ಪ್ರತಿದಿನ ಭೂಮಿ ಮೇಲೆ ಓಡಾಡುತ್ತಿದ್ದರೇ ಮನಸ್ಸಿನಲ್ಲಿ ಏನೋ ದುಗುಡ, ಕೆಲವು ಮಹಾನಗರಗಳಲ್ಲಿ ಸುರಂಗ ಮಾರ್ಗಗಳನ್ನ ಕೊರೆದು ಯಾವಾಗ ಏನಾಗುತ್ತದೆಯೋ ಅನ್ನೋ ಆತಂಕ. ವಿಜ್ಞಾನಿಗಳಿಗೂ (Scientist) ಭೂಮಿಯ ಅಭದ್ರತೆಯ ಬಗ್ಗೆ ಕಾಡುತ್ತಲೇ ಇರುತ್ತದೆ. ಒಂದು ವೇಳೆ ಪ್ರಕೃತಿ ತಿರುಗಿಬಿದ್ದರೆ? ನೀರಿಗೆ ಹಾಹಾಕಾರ ಉಂಟಾದ್ರೆ? ಬಾಹ್ಯಾಕಾಶದಲ್ಲಿ ಆಗೋ ಬದಲಾವಣೆಗಳಿಂದ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿದ್ರೆ? ಯುದ್ಧಗಳು ಎದುರಾಗಿ ಬಾಂಬ್ ಸ್ಫೋಟಗೊಂಡರೆ? ಅಥವಾ ರೊಬೋಟ್ಗಳೇ ಭೂಮಿಯನ್ನ ಆಳತೊಡಗಿದರೆ? ಇಂತಹ ನೂರಾರು ಪ್ರಶ್ನೆಗಳು ನಮ್ಮಲ್ಲಿ ಮತ್ತೆ-ಮತ್ತೆ ನಮ್ಮ ನಿದ್ದೆಗೆಡಿಸುತ್ತವೆ.
ಈ ಹಿಂದೆಯೇ ಕುರುಡು ಮಹಿಳೆ ಬಾಬಾ ವಂಗಾ ಏಲಿಯನ್ಗಳಿಂದ ಭೂಮಿಗೆ ಅಪಾಯ ಕಾದಿದೆ ಎಂದು ಭವಿಷ್ಯ ನುಡಿದಿದ್ದರು. ಆದ್ರೆ ಇತ್ತೀಚಿಗೆ ಅಮೆರಿಕದಲ್ಲಿ ಅನ್ಯಗ್ರಹದ ಜೀವಿಗಳ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಮುಂದೊಂದು ದಿನ ಅವುಗಳಿಂದಲೇ ದಾಳಿಗೆ ಒಳಗಾದ್ರೆ ಭೂಮಿಯ ಕಥೆ ಏನು? ಇಂತಹ ಆತಂಕಕಾರಿ ಪ್ರಶ್ನೆಗಳು ವಿಜ್ಞಾನಿಗಳ ತಲೆಯಲ್ಲಿ ಕೂಗುಬಿಟ್ಟಿವೆ.
ವಿಜ್ಞಾನಿಗಳ ಬೆನ್ನೇರಿರುವ ಈ ಆತಂಕಗಳು ಕ್ರಮೇಣ ಜಗತ್ತನ್ನೂ ನಿಧಾನಕ್ಕೆ ಆವರಿಸಿಕೊಂಡಿದೆ. ಇದಕ್ಕಾಗಿಯೇ ಸಾಕಷ್ಟು ರಾಷ್ಟ್ರಗಳು ಒಗ್ಗೂಡಿ ನಾರ್ವೆ ದೇಶದಲ್ಲಿ `ಡೂಮ್ಸ್ ಡೇ ವಾಲ್ಟ್’ (ಬೀಜ ಸಂಗ್ರಹ ಕೇಂದ್ರ)ವನ್ನ (The Doomsday Vault) ಸ್ಥಾಪಿಸಿಕೊಂಡಿವೆ. ಬುಲೆಟ್ ಪ್ರೂಫ್ ಗೋಡೆಗಳಿಂದ ನಿರ್ಮಿಸಲಾದ ಈ ವಾಲ್ಟ್ ಕ್ಷಿಪಣಿಗಳ ದಾಳಿಗೂ ಬಗ್ಗಲ್ಲ, ಅಣುಬಾಂಬ್ ಸ್ಫೋಟಿಸಿದ್ರೂ ಜಗ್ಗಲ್ಲ. ಒಂದು ವೇಳೆ ಭೂಮಿಗೆ ಅಪಾಯ ಉಂಟಾಗಿ ವಿನಾಶದ ಹಂತ ತಲುಪಿದ್ರೆ, ಮುಂದೆ ಮನುಷ್ಯ ಸಂತತಿ ಬದುಕು ಕಟ್ಟಿಕೊಳ್ಳಲು ಎದುರಾಗುವ ಆಹಾರ ಕೊರತೆಯನ್ನ ನೀಗಿಸಲು ಈ ಉಪಾಯ ಮಾಡಲಾಗಿದೆ. ಅದಕ್ಕಾಗಿ ಡೂಮ್ಸ್ ಡೇ ವಾಲ್ಟ್ನಲ್ಲಿ ಒಂದಿಷ್ಟು ಆಹಾರ ಧಾನ್ಯಗಳ ಬೀಜಗಳನ್ನ ಸಂಗ್ರಹಿಸಿಡಲಾಗಿದೆ.
ಡೂಮ್ಸ್ ಡೇ ವಾಲ್ಟ್ ಅಂದ್ರೆ ಏನು? – ಏಕೆ ಬೇಕು?
ಭಾರತ ಸೇರಿದಂತೆ ಸಾಕಷ್ಟು ರಾಷ್ಟ್ರಗಳು ಸೇರಿ ನಿರ್ಮಿಸಿರುವ ಆಹಾರ ಧಾನ್ಯಗಳ ಸುರಕ್ಷಿತ ಬಂಕರ್ ಅನ್ನೇ ಡೂಮ್ಸ್ ಡೇ ವಾಲ್ಟ್ ಎಂದು ಕರೆಯಲಾಗುತ್ತೆ. 65 ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಕ್ಷುದ್ರಗ್ರಹವೊಂದು ಅಪ್ಪಳಿಸಿತ್ತು. ಆಗ ಸಾಕಷ್ಟು ಜೀವ ಹಾನಿ ಸಂಭವಿಸಿತ್ತು, ಸಾಕಷ್ಟು ರೀತಿಯ ಆಹಾರ ಪದಾರ್ಥಗಳೂ ನಶಿಸಿ ಹೋದವು ಅನ್ನೋದು ವಿಜ್ಞಾನಿಗಳ ನಂಬಿಕೆ. ಆದ್ರೆ ಇತ್ತೀಚೆಗೆ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲೂ ಅಲ್ಲಲ್ಲಿ ಭೂಮಿ ಕಂಪನ ಉಂಟಾಗಿದೆ ಅನ್ನೋ ಬಗ್ಗೆ ಸುದ್ದಿ ಕೇಳುತ್ತಲೇ ಇರುತ್ತೇವೆ. ಹಾಗಾಗಿ ಮುಂದೆ ಭೂಮಿಗೆ ಹಾನಿಯಾದ್ರೆ ಆಹಾರ ಪ್ರಭೇದಗಳನ್ನ ಕಳೆದುಕೊಳ್ಳಬಾರದು ಎಂಬುದು ವಿಜ್ಞಾನಿಗಳ ಕಾಳಜಿ.
ಡೂಮ್ಸ್ ಡೇ ವಾಲ್ಟ್ ಯಾವಾಗ ಓಪನ್ ಆಗುತ್ತೆ?
ಜಗತ್ತಿನ ರಾಷ್ಟ್ರಗಳು ಬರಗಾಲದಂಥ ಪ್ರಕೃತಿ ವಿಕೋಪ, ಯುದ್ಧದಿಂದ ತೀವ್ರ ಹಾನಿಗೊಳಗಾದರೆ, ಕೃಷಿ ಬಿತ್ತನೆಗೆ ಇಲ್ಲಿಂದ ಧಾನ್ಯಗಳನ್ನು ಅಪೇಕ್ಷಿಸಬಹುದು. ಈ ಹಿಂದೆ 2015ರಲ್ಲಿ ಐಸಿಸಿ ಉಗ್ರರ ಉಪಟಳ ಹಾಗೂ ಅಂತರ್ಯುದ್ಧದಿಂದ ಸಿರಿಯಾದಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ ಉದ್ಭವಿಸಿತ್ತು. ಅಲ್ಲಿನ ರೈತರಿಗೆ ಬಿತ್ತನೆ ಮಾಡಲು ಬೀಜಗಳು ಇರಲಿಲ್ಲ. ಆಗ ಡೂಮ್ಸ್ ಡೇ ವಾಲ್ಟ್ನ ಸದಸ್ಯ ರಾಷ್ಟ್ರಗಳೆಲ್ಲವೂ ಒಮ್ಮತದಿಂದ 38 ಸಾವಿರ ಬಗೆಯ ಧಾನ್ಯ ಮಾದರಿಗಳನ್ನ ಕಳುಹಿಸಲು ನಿರ್ಧರಿಸಿದ್ದವು. ಆದರೆ, ಅಲ್ಲಿ ಅಂತರ್ಯುದ್ಧದ ಆತಂಕ ಮುಂದುವರಿದ ಕಾರಣದಿಂದಾಗಿ ನಿಗದಿತ ಆಹಾರ ಧಾನ್ಯಗಳನ್ನು ಮೊರಾಕ್ಕೊ, ಲೆಬನಾನ್ಗೆ ಕಳುಹಿಸಲಾಗಿತ್ತು.
ಭಾರತದ ಅತಿದೊಡ್ಡ ಬೀಜ ಬ್ಯಾಂಕರ್ ಎಲ್ಲಿದೆ ಗೊತ್ತಾ?
ಭಾರತವು ಲಡಾಕ್ನ ಲಾಂಗ್-ಲಾ ಪರ್ವತ ಶ್ರೇಣಿಯಲ್ಲಿ ದೇಶದ ಬೃಹತ್ ಬೀಜ ಬ್ಯಾಂಕ್ ನಿರ್ಮಿಸಿದೆ. ಇದನ್ನ ಡಿಆರ್ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ನಿರ್ವಹಿಸುತ್ತಿದೆ. ಇದು ಸಮುದ್ರ ಮಟ್ಟದಿಂದ 17,500 ಅಡಿ ಎತ್ತರದಲ್ಲಿದೆ. ಇಲ್ಲಿನ ತಾಪಮಾನವು -4 ರಿಂದ -40 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಈ ಬಂಕರ್ 50 ಸಾವಿರ ಧಾನ್ಯ ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ. ಆದ್ರೆ ಸದ್ಯಕ್ಕೆ 5,000ಕ್ಕೂ ಹೆಚ್ಚು ಬೀಜಗಳನ್ನು ಸಂರಕ್ಷಿಸಲಾಗಿದೆ.
ಡೂಮ್ಸ್ ಡೇ ವಾಲ್ಟ್ ನಿಯಮಗಳೇನು?
ಯಾವುದೇ ರಾಷ್ಟ್ರ ತಾನು ಭವಿಷ್ಯದವರೆಗೂ ಸಂರಕ್ಷಿಸಲು ಇಚ್ಛಿಸುವ ಬೀಜಗಳನ್ನ `ಡೂಮ್ಸ್ ಡೇ ವಾಲ್ಟ್’ ಬಂಕರ್ನಲ್ಲಿ ಸಂರಕ್ಷಿಸಿಡಲು ನಾರ್ವೆ ಸರ್ಕಾರದೊಂದಿಗೆ ಠೇವಣಿ ಒಪ್ಪಂದಕ್ಕೆ ಸಹಿಹಾಕಬೇಕು. ಹೀಗೆ ಠೇವಣಿ ಮಾಡಿದ ಬೀಜಗಳ ಮಾಲೀಕತ್ವದ ಹಕ್ಕುಗಳು ಆಯಾ ರಾಷ್ಟ್ರಗಳಿಗಷ್ಟೇ ಸೇರುತ್ತವೆ. ನಾರ್ವೆ ಸರ್ಕಾರ ಇದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. 200 ವರ್ಷಗಳವರೆಗೆ ಬೀಜಗಳು ಸುರಕ್ಷಿತವಾಗಿರುತ್ತವೆ.
200 ವರ್ಷಗಳ ವರೆಗೆ ಬೀಜಗಳು ಸೇಫ್
ಪರ್ವತದೊಳಗೆ 400 ಅಡಿ ಉದ್ದದ ಸುರಂಗ ನಿರ್ಮಿಸಿ ಡೂಮ್ಸ್ ಡೇ ವಾಲ್ಟ್ ನಿರ್ಮಿಸಲಾಗಿದೆ. ಇದು ಹಿಮಾವೃತ ಪ್ರದೇಶವಾಗಿರುವುದರಿಂದ ವಿದ್ಯುತ್ ಇಲ್ಲದಿದ್ದರೂ 18 ಡಿಗ್ರಿ ಕನಿಷ್ಠ ಉಷ್ಣಾಂಶ ಹೊಂದಿರುತ್ತದೆ. ಇಲ್ಲಿ ಶೀತ ಘಟಕಗಳು ಪ್ರಸ್ತುತ ಇಟ್ಟಿರುವ ಆಹಾರ ಧಾನ್ಯಗಳು ಸುಮಾರು 200 ವರ್ಷಗಳವರೆಗೆ ಕೆಡದಂತೆ ಹಾಗೆಯೇ ಇರುತ್ತವೆ.
Web Stories