ಬೆಳಗಾವಿ: ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಹಿತಿ ಕೊಟ್ಟರು.
ಉಕ್ರೇನ್ನಲ್ಲಿ ಸಿಕ್ಕಿಕೊಂಡಿರುವ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಅವರು, ಉಕ್ರೇನ್ ನಲ್ಲಿ ಬೆಳಗಾವಿ ಜಿಲ್ಲೆಯ 7 ವಿದ್ಯಾರ್ಥಿಗಳಿದ್ದಾರೆ. ರಾಜ್ಯದ 125ಕ್ಕೂ ಹೆಚ್ಚು ಜನ ಉಕ್ರೇನ್ ನಲ್ಲಿ ಇದ್ದಾರೆ. ದೇಶದ 20 ಸಾವಿರ ಜನ ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಇಲ್ಲಿ ಕರೆತಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ
ಯುದ್ಧ ನಿಲ್ಲಿಸಲು ಮೋದಿಯಿಂದ ರಷ್ಯಾದ ಪ್ರಧಾನಿಗೆ ಮನವಿ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನೋಡಲ್ ಅಧಿಕಾರಿಯನ್ನು ಸಹ ನೇಮಕ ಮಾಡಲಾಗಿದೆ. ಸುರಕ್ಷಿತವಾಗಿ ಭಾರತೀಯರನ್ನು ಕರೆ ತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಬಾರಿಯೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಇವತ್ತೆ ನನ್ನ ಹೆಸರು ಬರೆದಿಟ್ಟುಕೊಳ್ಳಿ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರುತ್ತೆ. 2024ಕ್ಕೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಮುಗಿದು ಹೋದ ಪಕ್ಷ, ಅಲ್ಲೊಂದು ಇಲ್ಲೊಂದು ಕಾಂಗ್ರೆಸ್ ಪುಡಾರಿಗಳಿದ್ದಾರೆ. ಹಾಳಾದ ಊರಿಗೆ ಉಳಿದವನೇ ಗೌಡ ಅಂತಾ ಉತ್ತರ ಕರ್ನಾಟಕದಲ್ಲಿ ನಾಣ್ಣುಡಿ ಇದೆ. ಅದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಗೆ ಇದೆ ಎಂದು ಆಕ್ರೋಶ ಹೊರಹಾಕಿದರು.
ಅರವಿಂದ್ ಪಾಟೀಲ್ ಬಿಜೆಪಿ ಸೇರ್ಪಡೆಗೆ ವಿರೋಧ ಕುರಿತು ಮಾತನಾಡಿದ ಅವರು, ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ನಿನ್ನೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ ಯಾರೇ ಸೇರ್ಪಡೆಯಾದರೂ ಆಶ್ವಾಸನೆ ಕೊಡಲ್ಲ. ಬಿಜೆಪಿ ನಿಂತ ನೀರಲ್ಲ, ಹರಿಯುವ ನೀರು, ಯಾರೂ ಬಂದರೂ ಸ್ವಾಗತ ಮಾಡಿದ್ದೇವೆ. ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಹೊರಟ್ಟಿ ನಮ್ಮ ಊರಿನವರೇ ನಮ್ಮ ಆತ್ಮೀಯರು. ಅವರು ಬರ್ತೀವಿ ಅಂತಾನೂ ಹೇಳಿಲ್ಲ. ಇಲ್ಲ ಅಂತಾನೂ ಹೇಳಿಲ್ಲ. ಅವರು ಬಂದ್ರೆ ಸ್ವಾಗತ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್ಗೆ ಉಕ್ರೇನ್ ಕರೆ!
ಬೆಳಗಾವಿ ಕೆಡಿಪಿ ಸಭೆಯಲ್ಲಿ ಮೂವರು ಕಂದಮ್ಮಗಳ ಸಾವು ಪ್ರಕರಣ ಪ್ರಸ್ತಾಪವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬೋಚಬಾಳ, ಮಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಇದರಿಂದ ತುಂಬಾ ನೋವಾಗಿದೆ. ಈ ಕುರಿತು ಮೂರು ದಿನಗಳಲ್ಲಿ ಪ್ರಕರಣದ ಸಮರ್ಪಕ ವರದಿ ನೀಡಬೇಕು. ಇಲ್ಲವಾದರೆ ನಾಲ್ಕನೇ ದಿನಕ್ಕೆ ಕೆಲಸ ಬಿಡಿ ಎಂದು ಖಡಕ್ ಎಚ್ಚರಿಕೆ ಕೊಟ್ಟರು.