ಬೆಲೆ ಏರಿಕೆ ಮಾಡಿದ್ದೀರಿ – ಸಿಎಂ ಪ್ರಚಾರದ ವೇಳೆ ರೊಚ್ಚಿಗೆದ್ದು ವ್ಯಕ್ತಿ ಕೂಗಾಟ

Public TV
2 Min Read
basavaraj bommai rally

ಬೆಂಗಳೂರು: ಬಿಜೆಪಿ (BJP) ಅಭ್ಯರ್ಥಿ ಪರವಾಗಿ ಮುಖ್ಯಮಂತ್ರಿ ಪ್ರಚಾರ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ರೊಚ್ಚಿಗೆದ್ದು ಸಿಎಂ ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಬೆಲೆ ಏರಿಕೆ ವಿಚಾರವಾಗಿ ಸಿಎಂ ವಿರುದ್ಧ ವ್ಯಕ್ತಿ ಗುಡುಗಿದ್ದಾನೆ.

basavaraj bommai rally1 2

ನೆಲಮಂಗಲದಲ್ಲಿ (Nelamangala) ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಶಂಕರ್ ನಾಯಕ್ ಪರ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮತಬೇಟೆಗೆ ಇಳಿದಿದ್ದಾರೆ. ನೆಲಮಂಗಲದ ಐಬಿಯಿಂದ ಸಿಎಂ ರೋಡ್‌ ಶೋನಲ್ಲಿ ಭಾಗಿಯಾಗಿದ್ದರು. ಸಚಿವ ಸುಧಾಕರ್‌ ಕೂಡ ಸಾಥ್‌ ನೀಡಿದ್ದರು. ಸಿಎಂ ಪ್ರಚಾರದ ವೇಳೆ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ರೊಚ್ಚಿಗೆದ್ದ ಘಟನೆ ನಡೆಯಿತು. ಇದನ್ನೂ ಓದಿ: ವರುಣಾ ಕ್ಷೇತ್ರದಲ್ಲಿ 100 ಪರ್ಸೆಂಟ್ ಗೆಲ್ಲುವ ವಿಶ್ವಾಸವಿದೆ: ಸೋಮಣ್ಣ

basavaraj bommai rally3

“ನಾವು ಬಡವರು. ಗ್ಯಾಸ್‌ ಬೆಲೆ ಏರಿಕೆಯಾಗಿದೆ. ನಾವು ವೋಟು ಹಾಕ್ತೀವಿ. ನಮ್ಮ ಹಕ್ಕು ಕೇಳುತ್ತೇವೆ. ಅವರು ಯಾರಿಗೆ ಸಿಎಂ” ಎಂದು ಮುಖ್ಯಮಂತ್ರಿ ವಿರುದ್ಧ ವ್ಯಕ್ತಿ ಗರಂ ಆಗಿದ್ದ. ಈ ವೇಳೆ ಆತನನ್ನು ನಿಯಂತ್ರಿಸಲು ಪೊಲೀಸರು ಮುಂದಾದರು. ಅಲ್ಲೇ ಇದ್ದ ಪಕ್ಷದ ಕಾರ್ಯಕರ್ತ ಕೂಡ ಆ ವ್ಯಕ್ತಿಯನ್ನು ಸಮಾಧಾನಪಡಿಸಲು ಮುಂದಾದರು. ಆದರೆ ಇದ್ಯಾವುದಕ್ಕೂ ಜಗ್ಗದ ವ್ಯಕ್ತಿ ಸಿಎಂ ವಿರುದ್ಧ ಕೂಗಾಡಿದ. ನಂತರ ವ್ಯಕ್ತಿಯನ್ನು ಪೊಲೀಸರು ದೂರ ತಳ್ಳಿದರು. ಈ ದೃಶ್ಯದ ವೀಡಿಯೋ ಕೂಡ ಸೆರೆಯಾಗಿದೆ.

ಪ್ರಚಾರದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ ಹಣ, ತೋಳ್ಬಲ ನೆಲಮಂಗಲದಲ್ಲಿ ನಡೆಯುವುದಿಲ್ಲ. ಎಲ್ಲಾ ಸಮುದಾಯದವರು ಸಪ್ತಗಿರಿ ಶಂಕರ್‌ ನಾಯಕ್‌ಗೆ ಬೆಂಬಲ ಕೊಡಲು ತೀರ್ಮಾನ ಮಾಡಿದ್ದಾರೆ. ನೆಲಮಂಗಲ ಅಭಿವೃದ್ಧಿ ಮಾಡೋದು ನಮ್ಮ ಕರ್ತವ್ಯ. ಇದನ್ನ ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್ ಭದ್ರಕೋಟೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ – ಯಾರ ಕೈ ಸೇರುತ್ತೆ ‘ಗುಬ್ಬಿ’

ಕಾಂಗ್ರೆಸ್ ಬ್ರಿಟಿಷರ ವಂಶ. ಬ್ರಿಟಿಷರು ಬಿತ್ತಿದ ಬೀಜ ಕಾಂಗ್ರೆಸ್. ಜನರನ್ನ ಜಾತಿ ಮತಗಳಿಂದ ಹೊಡೆಯುತ್ತಿದೆ. 2013-18 ರವರೆಗೂ ಸಿದ್ದರಾಮಯ್ಯ ಸರ್ಕಾರ ಲೂಟಿ ಮಾಡಿದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೇನೆ. ಎಲ್ಲೆಡೆ ಬಿಜೆಪಿ ಅರಳುತ್ತದೆ. ನೆಲಮಂಗಲದಲ್ಲೂ ಬಿಜೆಪಿ ಅರಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article