ದಾವಣಗೆರೆ: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ಸಂಬಂಧಿಯೇ ವಂಚಿಸಿದ ಕಾರಣ ಬೇಸತ್ತ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.
ನಾಗಭೂಷಣ್ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿ. ಆತ್ಮಹತ್ಯೆ ಯತ್ನಕ್ಕೂ ಮುನ್ನ ತನಗಾದ ಅನ್ಯಾಯದ ಕುರಿತು ವಿಡಿಯೋ ಮಾಡಿ ವಿಷ ಸೇವಿಸಿದ್ದಾರೆ. ವಿಡಿಯೋ ದಲ್ಲಿ ತನ್ನ ಸಂಬಂಧಿ ಚಿಕ್ಕಪ್ಪ ಜಯರುದ್ರಯ್ಯ ಎಂಬವರ ವಿರುದ್ಧ ಆರೋಪ ಮಾಡಿದ್ದಾರೆ.
ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ನಾಲ್ಕು ಲಕ್ಷ ರೂ. ಹಣವನ್ನ ಪಡೆದುಕೊಂಡು ವಾಪಸ್ ನೀಡಿಲ್ಲ. ಈ ಬಗ್ಗೆ ಹಣವನ್ನ ಕೇಳಿದರೆ ಹಲ್ಲೆ ಮಾಡುವುದು ಹಾಗೂ ಆತನಿಗೆ ಬೆದರಿಕೆ ಹಾಕುವುದನ್ನ ಮಾಡಿದ್ದಾಗಿ ತಿಳಿಸಿದ್ದಾರೆ.
ಸದ್ಯ ನಾಗಭೂಷಣ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ನಾಗಭೂಷಣ್ ಆರೋಪಗಳನ್ನು ತಿರಸ್ಕರಿಸಿರುವ ಜಯರುದ್ರಯ್ಯ ಕೌಟುಂಬಿಕ ಆಸ್ತಿ ಜಗಳ ಹಿನ್ನೆಲೆ ತಮ್ಮ ಮೇಲೆ ಆರೋಪ ಮಾಡಲಾಗಿದೆ. ತಮ್ಮ ಜಾಗದಲ್ಲೇ ನಾಗಭೂಷಣ್ ಮನೆ ಕಟ್ಟಿಸಿದ್ದು, ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದರೆ ಸುಳ್ಳು ಆರೋಪ ಮಾಡಿದ್ದಾಗಿ ತಿಳಿಸಿದ್ದಾರೆ.
ಇನ್ನು ಆತ್ಮಹತ್ಯೆಗೆ ಯತ್ನಿಸಿರುವ ನಾಗಭೂಷಣ್ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಘಟನೆ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.