ಮಂಡ್ಯ: ಅಲಂಕಾರಿಕ ಗಿಡ ಎಂದು ಜನರನ್ನು ನಂಬಿಸಿ ಮನೆಯ ಮುಂದೆಯೇ ಐದು ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ ಜರುಗಿದೆ.
ಶ್ರೀನಿವಾಸ ಅಗ್ರಹಾರದ ಸುರೇಶ್ ಎಂಬಾತ ತನ್ನ ಮನೆಯ ಮುಂದೆ ಐದು ಗಾಂಜಾ ಗಿಡಗಳನ್ನು ಬೆಳೆದಿದ್ದ. ಸ್ಥಳೀಯರು ಇದು ಯಾವ ಗಿಡ ಎಂದು ಕೇಳಿದಾಗ ಸುರೇಶ್ ಇದು ಅಲಂಕಾರಿಕ ಗಿಡ ಎಂದು ಹೇಳುತ್ತಿದ್ದ. ಗಾಂಜಾ ಗಿಡ ಹೂ ಬಿಡುವ ಹಂತಕ್ಕೆ ಬಂದ ವೇಳೆ ಗಿಡಗಳಿಗೆ ಸೀರೆ ಸುತ್ತಿ ಮರೆ ಮಾಡಿದ್ದಾನೆ. ಈ ವಿಚಾರವನ್ನು ಸ್ಥಳೀಯರೊಬ್ಬರು ಶ್ರೀರಂಗಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಪರಿಶೀಲನೆ ಮಾಡಿದ ವೇಳೆ ಅದು ಅಲಂಕಾರಿಕ ಗಿಡ ಅಲ್ಲ ಗಾಂಜಾ ಗಿಡ ಎಂದು ತಿಳಿದು ಬಂದಿದೆ. ಸದ್ಯ 9 ಕೆಜಿಯ 3 ಲಕ್ಷ ಮೌಲ್ಯದ ಗಾಂಜಾ ಗಿಡವನ್ನು ಪೊಲೀಸರು ಜಪ್ತಿ ಮಾಡಿ ಸುರೇಶ್ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

