ಹುಬ್ಬಳ್ಳಿ: ಪೇದೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ವಿರುದ್ಧ ಪೋಸ್ಟ್ ಹಾಕಿ ಅಮಾನತಾದ ಬೆನ್ನಲ್ಲೇ ಇದೀಗ ಮತ್ತೊಬ್ಬ ಪೇದೆ ಬಿಜೆಪಿ ಪರ ಹೇಳಿಕೆ ನೀಡಲು ಮುಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ರವಿಕುಮಾರ್ ಕುರಿ ಸದ್ಯ ಎಡವಟ್ಟು ಮಾಡಿಕೊಂಡಿರುವ ಪೇದೆ. ರವಿಕುಮಾರ್ ಕುರಿ ಹುಬ್ಬಳ್ಳಿ ದಕ್ಷಿಣ ವಲಯ ಎಸಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರವಿಕುಮಾರ್ ಫೇಸ್ಬುಕ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಅವಹೇಳನ ಮಾಡಿದ್ದಾರೆ.
ಪೇದೆ ರವಿಕುಮಾರ್ ಕುರಿ, ತಮ್ಮ ಫೇಸ್ಬುಕ್ ನಲ್ಲಿ ಅಖಿಲೇಶ್ ಯಾದವ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿರುವ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಲು ಮುಂದಾಗಿದ್ದು, ಅಖಿಲೇಶ್ ಯಾದವ್ ಅವರಿಗೆ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆಯೂ ರವಿಕುಮಾರ್ ಬಿಜೆಪಿಯನ್ನು ಬೆಂಬಲಿಸಿ ಹಾಗೂ ಹೊಗಳಿ ಅನೇಕ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ. ಇದನ್ನು ಓದಿ: ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ?- ಎಫ್ಬಿಯಲ್ಲಿ ಪೋಸ್ಟ್ ಪ್ರಕಟಿಸಿದ ಪೇದೆ ಅಮಾನತು
ಇತ್ತೀಚೆಗಷ್ಟೇ ಪೊಲೀಸ್ ಪೇದೆ ಅರುಣ್ ಡೊಳ್ಳಿನ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ ಅವರನ್ನು ಅಮಾನತು ಮಾಡಲಾಗಿತ್ತು. ಈ ಬೆನ್ನಲ್ಲೇ ಈಗ ಮತ್ತೊಬ್ಬ ಹುಬ್ಬಳ್ಳಿಯ ಪೇದೆ ಇಂತದ್ದೇ ಎಡವಟ್ಟು ಮಾಡಿಕೊಂಡಿದ್ದು, ಸಾರ್ವಜನಿಕರು ಪೇದೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸರು ಬಿಜೆಪಿ ಕಾರ್ಯಕರ್ತರಾದರೇ ಎನ್ನುವ ಶಂಕೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ.