ಬೆಂಗಳೂರು: ಅಪಘಾತ ಮಾಡಿದವನ ಮೇಲೆ ಬಾಯಿಗೆ ಬಂದಂತೆ ಬೈದಿದ್ದಕ್ಕೆ ಆತನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರವೀಣ್ ಅಪಹರಣಕ್ಕೆ ಒಳಗಾದ ಯುವಕ. ಸಂತೋಷ್, ಅರ್ಜುನ್, ಮುತ್ತು, ಜೀವಾ, ಮುರಳಿ ಪ್ರವೀಣ್ ನನ್ನು ಅಪಹರಣ ಮಾಡಿ ಕೊಲೆ ಮಾಡಲು ಮುಂದಾಗಿದ್ದರು. ಖಚಿತ ಮಾಹಿತಿ ಹಿನ್ನಲೆ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಶುಕ್ರವಾರ ರಾತ್ರಿ ರಸ್ತೆಯಲ್ಲಿ ಓಮ್ನಿ ಕಾರು ಡಿಯೋಗೆ ಡಿಕ್ಕಿ ಹೊಡೆದಿತ್ತು. ಈ ವಿಚಾರದ ಬಗ್ಗೆ ಡಿಯೋ ಓಡಿಸುತ್ತಿದ್ದ ಪ್ರವೀಣ್ ಓಮ್ನಿ ಚಾಲಕನಿಗೆ ಬಾಯಿಗೆ ಬಂದಂತೆ ಬೈದಿದ್ದ. ಎಲ್ಲರ ಎದುರು ಅವಮಾನ ಮಾಡಿದ ಎಂದು ಕಾರನ್ನು ಓಡಿಸ್ತಾ ಇದ್ದವರು ಪ್ರವೀಣ್ ನನ್ನು ಕಿಡ್ನ್ಯಾಪ್ ಮಾಡಿದ್ದರು.
ಕಿಡ್ನ್ಯಾಪ್ ಮಾಡಿ ಮುನಿಸ್ವಾಮಪ್ಪ ಪಾಳ್ಯದಲ್ಲಿರುವ ಸ್ಮಶಾನಕ್ಕೆ ಹೋಗಿ ಹೊಡೆದು ಗುಂಡಿಯಲ್ಲಿ ಪ್ರವೀಣ್ ನನ್ನು ಜೀವಂತ ಸಮಾಧಿ ಮಾಡಲು ಪ್ಲಾನ್ ಮಾಡಿದ್ದರು. ಅಷ್ಟರಲ್ಲಿ ಸ್ಥಳೀಯರು ಕಿಡ್ನ್ಯಾಪ್ ಮಾಡಿದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಖಚಿತ ಮಾಹಿತಿ ಹಿನ್ನಲೆ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಒಬ್ಬನ ಅಜ್ಜ ಸ್ಮಶಾನವನ್ನು ಕಾಯುತ್ತಿದ್ದರು. ಹೀಗಾಗಿ ಹಲ್ಲೆ ಮಾಡಿ ಹೂತು ಹಾಕುವ ಉದ್ದೇಶದಿಂದ ಪ್ರವೀಣ್ ನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿದ್ದಾರೆ.