ಶ್ರೀನಗರ: ಕಳೆದ ನಾಲ್ಕು ದಿನಗಳ ಹಿಂದೆ ದಾರಿ ತಪ್ಪಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ್ದ ಬಾಲಕನನ್ನು ಭಾರತೀಯ ಸೇನಾ ಅಧಿಕಾರಿಗಳು ಪಾಕಿಸ್ತಾನದ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಪಾಕಿಸ್ತಾನದ 11 ವರ್ಷದ ಬಾಲಕ ಮೊಹಮ್ಮದ್ ಅಬ್ದುಲ್ಲಾ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ದಾರಿತಪ್ಪಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ್ದ.
ಬಾಲಕ ಮೊಹಮ್ಮದ್ ಅಬ್ದುಲ್ಲಾ ನನ್ನು ಕಂಡ ಭಾರತೀಯ ಸೇನಾ ಅಧಿಕಾರಿಗಳು ಆತನನ್ನು ಜೂನ್ 24 ರಂದು ಜಮ್ಮು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಿದ್ದರು. ಅದಕ್ಕೆ ಕೂಡಲೇ ಬಾಲಕನನ್ನು ವಾಪಸ್ ಕಳಿಸಲು ಬೇಕಾದ ಅಗತ್ಯ ವಿಧಿ ವಿಧಾನಗಳನ್ನು ಪೊಲೀಸ್ ಅಧಿಕಾರಿಯೊಬ್ಬರು ಪೂರೈಸಿದರು. ಬಾಲಕ ಗಡಿ ಪ್ರವೇಶಿಸಿದ ನಾಲ್ಕು ದಿನಗಳೊಳಗೆ ಆತನನ್ನು ಹೊಸ ಬಟ್ಟೆ ತೊಡಿಸಿ ಸಿಹಿ ತಿಂಡಿಗಳೊಂದಿಗೆ ಮರಳಿ ಇಂದು ಪಾಕಿಸ್ತಾನಕ್ಕೆ ಕಳುಹಿಸಲಾಯಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸೇನಾ ವಕ್ತಾರರು ಅಬ್ದುಲ್ಲಾ ಚಿಕ್ಕ ವಯಸ್ಸಿನವರಾಗಿರುವುದರಿಂದ ಅವನನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಈ ಘಟನೆ ಭಾರತ ಹಾಗೂ ಪಾಕಿಸ್ತಾನ್ ನಡುವೆ ವಿಶ್ವಾಸವನ್ನು ಬೆಳೆಸುತ್ತದೆ ಎಂದರು.
ಭಾರತೀಯ ಸೇನೆಯು ನೈತಿಕತೆ ಹಾಗೂ ಮಾನವೀಯ ಮೌಲ್ಯಗಳ ಶಕ್ತಿಯಾಗಿದೆ. ಅದು ಮುಗ್ಧ ನಾಗರಿಕರೊಂದಿಗೆ ವ್ಯವಹರಿಸುವಾಗ ಸೂಕ್ಷ್ಮತೆಯಿಂದ ವರ್ತಿಸುತ್ತದೆ ಎಂದು ಸೇನಾ ವಕ್ತಾರರು ಹೇಳಿದರು.