ಸೋನಿಯಾ ಗಾಂಧಿ ನಾಯಕತ್ವದಲ್ಲಿ ದೇಶವನ್ನು ಮತ್ತೆ ಮುನ್ನಡೆಸುವ ಶಕ್ತಿಯಾಗಿ ಕಾಂಗ್ರೆಸ್ ಎದ್ದು ಬರಲಿದೆ: ಸಿದ್ದರಾಮಯ್ಯ

Public TV
2 Min Read
Siddaramaiah and soniya

ಬೆಂಗಳೂರು: ಕಾಂಗ್ರೆಸ್ ಪಕ್ಷ, ಇತ್ತೀಚಿನ ಕೆಲವು ಚುನಾವಣಾ ಸೋಲುಗಳ ತಾತ್ಕಾಲಿಕ ಹಿನ್ನಡೆಯನ್ನು ಎದುರಿಸಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ದೇಶವನ್ನು ಮತ್ತೆ ಮುನ್ನಡೆಸುವ ಪ್ರಬಲ ರಾಜಕೀಯ ಶಕ್ತಿಯಾಗಿ ಕಾಂಗ್ರೆಸ್ ಎದ್ದು ಬರಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

SIDDARAMAIAH

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕರಿಂದ ಹಿಡಿದು ಕಾರ್ಯಕರ್ತರ ವರೆಗೆ ಪ್ರತಿಯೊಬ್ಬರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವವನ್ನು ಬೆಂಬಲಿಸುತ್ತಿದ್ದಾರೆ. ಇದೇ ನಂಬಿಕೆ ಮತ್ತು ಆತ್ಮ ವಿಶ್ವಾಸದಿಂದ ರಾಜ್ಯದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿ ಪಕ್ಷಕ್ಕೆ ಗೆಲುವಿನ ಉಡುಗೊರೆ ನೀಡುತ್ತೇವೆ. ಹೊರಗಿನ ವಿರೋಧ ಪಕ್ಷಗಳ ಅಪಪ್ರಚಾರ ಮತ್ತು ಕೆಲವು ಒಳಗಿನ ಹಿತಶತ್ರುಗಳ ಕುಟಿಲ ಕಾರಸ್ತಾನಗಳಿಂದ ವಿಚಲಿತರಾಗದೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಭರವಸೆ ಇಟ್ಟು ಪಕ್ಷಕ್ಕೆ ಶಕ್ತಿತುಂಬಲು ಪ್ರತಿಯೊಬ್ಬ ಕಾಂಗ್ರೆಸಿಗನು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ರಾಗಿ, ರಾಗಿ ಎಂದು ಕೂಗಿದ ಕಾಂಗ್ರೆಸ್ ಶಾಸಕ: ಸ್ಪೀಕರ್ ಕೆಂಡಾಮಂಡಲ

soniya gandhi

ಈಗ ಸೋನಿಯಾ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸುತ್ತಿರುವವರು, ಅವರದ್ದೇ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಸತತ ಎರಡು ಬಾರಿ ಲೋಕಸಭಾ ಚುನಾವಣೆಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದನ್ನು ಮರೆತಿರುವುದು ಆತ್ಮದ್ರೋಹವಲ್ಲದೆ ಮತ್ತೇನು?. ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿಯೇ ಕೇಂದ್ರದಲ್ಲಿ ಮಾತ್ರವಲ್ಲ, ಹದಿನೈದಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು ಎನ್ನುವುದನ್ನು ಇಂದು ಅವರ ನಾಯಕತ್ವವನ್ನು ಪ್ರಶ್ನಿಸುವವರು ನೆನಪು ಮಾಡಿಕೊಳ್ಳಬೇಕಾಗಿದೆ. ದೇಶಕ್ಕೆ ಬಲಿದಾನಗೈದ ಪತಿಯ ಅಗಲಿಕೆಯ ಶೋಕ ಮತ್ತು ಎರಡು ಎಳೆಯ ಮಕ್ಕಳ ಭವಿಷ್ಯದ ಕಾಳಜಿಯಿಂದ ರಾಜಕೀಯದಿಂದ ದೂರ ಇದ್ದ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷವನ್ನು ಉಳಿಸಲಿಕ್ಕಾಗಿ ಒತ್ತಾಯದಿಂದ ಸಕ್ರಿಯ ರಾಜಕೀಯಕ್ಕೆ ಎಳೆದು ತಂದಿದ್ದ ಕೆಲವು ನಾಯಕರೇ ಈಗ ಸೋನಿಯಾ ಸೈದ್ಧಾಂತಿಕ ನಾಯಕತ್ವವನ್ನು ಪ್ರಶ್ನಿಸುತ್ತಿರುವುದು ವಿಷಾದನೀಯ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜೇಮ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ: ಸಿದ್ದರಾಮಯ್ಯ

RAHUL GANDHI 1

2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದ ಸೋನಿಯಾ ಗಾಂಧಿಯವರು ಹಕ್ಕಿನಿಂದ ಪಡೆಯಬಹುದಾದ ಪ್ರಧಾನಿ ಪಟ್ಟವನ್ನು ತ್ಯಾಗ ಮಾಡಿ ವಿಶ್ವಕ್ಕೆ ಮಾದರಿಯಾಗಿದ್ದನ್ನು ಇಡೀ ವಿಶ್ವ ಕಂಡಿದೆ. ಇಂದಿನ ಟೀಕಾಕಾರರು ಈ ತ್ಯಾಗವನ್ನು ಕಂಡಿಲ್ಲವೇ?. ಕೆಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು. ಆದರೆ ಆಹಾರ, ಶಿಕ್ಷಣ, ಉದ್ಯೋಗ ಮತ್ತು ಮಾಹಿತಿಯ ಶಾಸನಾತ್ಮಕ ಹಕ್ಕನ್ನು ನೀಡಿದ್ದ ಕಾರ್ಯಕ್ರಮಗಳ ರೂವಾರಿಯಾದ ಸೋನಿಯಾ ಗಾಂಧಿಯವರು ದೇಶದ ಜನತೆಯ ಮನೆ-ಮನಗಳಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಆ ಚಿತ್ರವನ್ನು ಅಳಿಸಲಾಗದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಒಂಟಿಯಲ್ಲ, ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ ದೇಶದ ಕೋಟ್ಯಂತರ ಜನ ಅವರ ಬೆನ್ನ ಹಿಂದಿದ್ದಾರೆ. ಇಂದಿನ ಸಂಕಷ್ಟ ಸ್ಥಿತಿಯಿಂದ ದೇಶವನ್ನು ಕಾಂಗ್ರೆಸ್ ಪಕ್ಷ ಮಾತ್ರ ಪಾರುಮಾಡಲು ಸಾಧ್ಯ ಎನ್ನುವುದು ಪ್ರತಿಯೊಬ್ಬರೂ ಅರಿತಿದ್ದಾರೆ. ಇದನ್ನೂ ಓದಿ: ಆಪ್‍ನಿಂದ `ಮಾಫಿಯಾ ಮುಕ್ತವಾಗಲಿದೆ ಪಂಜಾಬ್’: ಕಾಂಗ್ರೆಸ್ ಮುಖಭಂಗಕ್ಕೆ ಕಾರಣವಾಯ್ತು ಸಿಧು ಹೇಳಿಕೆ

ಕೋಮುವಾದಿ ರಾಜಕಾರಣ, ಮಾಧ್ಯಮಗಳ ಮೂಲಕ ನಡೆಸಲಾಗುತ್ತಿರುವ ಸುಳ್ಳುಗಳ ಅಪಪ್ರಚಾರ, ದುಡ್ಡಿನ ಬಲದ ಚುನಾವಣಾ ತಂತ್ರ-ಕುತಂತ್ರಗಳ ಎದುರು ಸೈದ್ಧಾಂತಿಕ ರಾಜಕಾರಣಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಇದು ತಾತ್ಕಾಲಿಕ ಹಿನ್ನಡೆ, ಸತ್ಯವೇ ಗೆಲ್ಲುವುದು. ಸತ್ಯಮೇವ ಜಯತೆ.

Share This Article
Leave a Comment

Leave a Reply

Your email address will not be published. Required fields are marked *