ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ಕುತೂಹಲ ಕೆರಳಿಸಿದ್ದ ಈದ್ಗಾ ಮೈದಾನದ ಗೊಂದಲದ ವಿಚಾರಕ್ಕೆ ತಾಲೂಕು ಆಡಳಿತ ಹಾಗೂ ಶಾಸಕರ ನೇತೃತ್ವದಲ್ಲಿ ತೆರೆ ಎಳೆದಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.
ನೆಲಮಂಗಲ ತಾಲೂಕಿನ ಕಣೇಗೌಡನಹಳ್ಳಿ ಸರ್ವೇನಂಬರ್ 40ರಲ್ಲಿ 2 ಎಕರೆ 30 ಗುಂಟೆ ಜಮೀನಿನಲ್ಲಿ ಈದ್ಗಾ ಮೈದಾನದ ಅಭಿವೃದ್ದಿ ಕಾಮಗಾರಿಗೆ ಕಳೆದ ಒಂದು ತಿಂಗಳ ಹಿಂದೆ ಶಾಸಕ ಡಾ.ಕೆ.ಶ್ರೀನಿವಾಸ್ಮೂರ್ತಿ ಪೂಜೆ ಸಲ್ಲಿಸಲು ಮುಂದಾಗಿದ್ದರು. ಇದೇ ವೇಳೆ ಗ್ರಾಮದ ಜನರು ಈದ್ಗಾ ಕಟ್ಟಡ ನಿರ್ಮಾಣದ ಆಸು-ಪಾಸಿನಲ್ಲಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದ ವೇಳೆ, ಕಣೇಗೌಡನಹಳ್ಳಿ ಮತ್ತು ಇಸ್ಲಾಂಪುರದಲ್ಲಿ ಕೊಂಚಮಟ್ಟಿಗೆ ಜಮೀನಿನ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಇದನ್ನೂ ಓದಿ: ಮಿಷನ್ 123 ಜೆಡಿಎಸ್ನ ಛಲ- ಕುಮಾರಸ್ವಾಮಿ
ಸಮಸ್ಯೆಯ ತೀರ್ವತೆಯನ್ನರಿತ ಸ್ಥಳೀಯ ಶಾಸಕ ಹಾಗೂ ತಹಶೀಲ್ದಾರ್ ಕೆ.ಮಂಜುನಾಥ್ ನೇತೃತ್ವದಲ್ಲಿ ಸಭೆಯನ್ನು ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದು ಸರ್ವೇ ನಂಬರ್ 40 ರಲ್ಲಿರುವ ಸರಕಾರಿ ಜಮೀನಿನಲ್ಲಿ 2 ಎಕರೆ 30 ಗುಂಟೆ ಜಮೀನನ್ನು 1998-99ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಈದ್ಗಾ ಮೈದಾನಕ್ಕೆ ಸ್ಥಳ ನಿಗದಿಪಡಿಸಿದ್ದಾರೆ. ಉಳಿದ ಜಮೀನನಲ್ಲಿ ಗ್ರಾಮದ ವಿವಿಧ ಜನರಿಗೆ ಹಂಚಿಕೆ ಮಾಡಲಾಗಿದೆ, ಈ ವಿಚಾರವಾಗಿ ತಾಲೂಕು ಆಡಳಿತ ಕೂಡಲೇ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ತಕರಾರು ಆಗದಂತೆ ಎಚ್ಚರಿಕೆವಹಿಸುವಂತೆ ಶಾಸಕ ರು ತಾಲೂಕು ಆಡಳಿತಕ್ಕೆ ಸೂಚನೆಯನ್ನ ನೀಡಿದರು.
ತಾ.ಪಂ ಮಾಜಿ ಸದಸ್ಯ ಸಲೀಂಪಾಷ ಮಾತನಾಡಿ, ಗ್ರಾಮದಲ್ಲಿ ಈದ್ಗಾ ಮೈದಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಕೆಲವರು ದುರುದ್ದೇಶದಿಂದ ಪೂರ್ವಕವಾಗಿ ಇತ್ತೀಚೆಗೆ ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಸದರಿ ವಿಚಾರವನ್ನು ಕೂಡಲೇ ಶಾಸಕರ ಮೂಲಕ ತಾಲೂಕು ಆಡಳಿತದ ಗಮನಕ್ಕೆ ತರಲಾಗಿತ್ತು, ಗ್ರಾಮದ ಮುಸಲ್ಮಾನ್ ಬಾಂದವರ ಧಾರ್ಮಿಕ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಸಮಸ್ಯೆ ಎದುರಾದ ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆಹರಿಸಲು ಮುಂದಾದ ಶಾಸಕರು ಹಾಗೂ ತಹಶೀಲ್ದಾರ್ ಕೆ.ಮಂಜುನಾಥ್ ಮತ್ತು ಸಿಬ್ಬಂದಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ್, ಶಿರಸ್ಥೇದಾರ್ ಶ್ರೀನಿವಾಸ್ಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಪಿ.ಹೇಮಂತ್ಕುಮಾರ್, ಮುಖಂಡರಾದ ಸಂಪತ್ಬಾಬು, ಮೋಹಿದ್ದೀನ್, ರಜಾಕ್, ಸನಾವುಲ್ಲಾ, ಇಯತ್, ಶಫಿ, ಬಾಬಜಾನ್ ಮತ್ತಿತರರು ಉಪಸ್ಥಿತರಿದ್ದರು.