ಮಡಿಕೇರಿ: ಕೊವಿಡ್ ಕೇರ್ ಸೆಂಟರ್ ಅಂದ್ರೆ ಕೇವಲ ಸಮಸ್ಯೆಗಳ ಕೇಂದ್ರ ಆನ್ನೋ ಸ್ಥಿತಿ ಎಷ್ಟೋ ಕಡೆಗಳಲ್ಲಿ ಇರಬಹುದು. ಊಟ ತಿಂಡಿ ಚೆನ್ನಾಗಿಲ್ಲ ದೂರುಗಳು ಬರುತ್ತಿರಬಹುದು. ಆದರೆ ಕೊಡಗು ಜಿಲ್ಲೆಯ ಕೊವಿಡ್ ಕೇರ್ ಸೆಂಟರ್ ನಲ್ಲಿ ಹಾಗಲ್ಲ. ಸರ್ಕಾರ ನೀಡಿರುವ ಮೆನು ಬದಲಿಗೆ ಕೊಡಗಿನ ಆಹಾರ ಪದ್ಧತಿಯ ರೀತಿಯಲ್ಲೇ ಕೊವಿಡ್ ಕೇರ್ ಸೆಂಟರ್ ಗಳಲ್ಲಿ ಇರುವವರಿಗೆ ಆಹಾರ ನೀಡಲಾಗುತ್ತಿದೆ. ಅದಕ್ಕಿಂತ ಮುಖ್ಯವಾಗಿ ಅವರಿಗೆ ವಾರದಲ್ಲಿ ಒಮ್ಮೆ ಮಾಂಸದ ಊಟ, ಮೊಟ್ಟೆ ರೆಸಿಪಿಗಳನ್ನು ಕೊಟ್ಟು ಸೋಂಕಿತರಿಗೆ ಭರ್ಜರಿ ಊಟ ನೀಡಲಾಗುತ್ತಿದೆ. ಇದು ಸೋಂಕಿತರಿಗೆ ಫುಲ್ ಖುಷಿಯಾಗುವಂತೆ ಮಾಡಿದೆ.
ಸರ್ಕಾರ ಕೋವಿಡ್ ಕೇರ್ ಗಳಲ್ಲಿರುವವರಿಗೆ, ಕೊವಿಡ್ ಆಸ್ಪತ್ರೆಗಳಲ್ಲಿ ಇರುವವರಿಗೆ ಇಂಥಹದ್ದೇ, ಇಂತಿಷ್ಟೇ ಆಹಾರ ಕೊಡಬೇಕು ಎಂದು ಮೆನು ಮಾಡಿದೆ. ಆ ಮೆನು ಪ್ರಕಾರ ಆಹಾರ ನೀಡೋದಾದ್ರೆ, ತಿಂಡಿಗೆ ಚಿತ್ರಾನ್ನ, ಪೊಂಗಲ್, ಬಿಸಿಬೇಳೆ ಬಾತ್ ಇಂತಹವುಗಳನ್ನು, ಊಟಕ್ಕೆ ಅನ್ನ ಸಾಂಬಾರ್ ಗಳನ್ನು ನೀಡಬೇಕು. ಇಂತಹವುಗಳನು ಕೊಡಗಿನ ಜನರು ಹೆಚ್ಚಿನ ಪ್ರಮಾಣದಲ್ಲಿ ಅನ್ನದ ಆಹಾರಗಳನ್ನು ಬಳಸೋದು ಕಡಿಮೆ. ಒಂದು ವೇಳೆ ಅವುಗಳನ್ನು ನೀಡಿದರೆ ಕೊಡಗಿನ ಕೊವಿಡ್ ಕೇರ್ ಸೆಂಟರ್ ಗಳಲ್ಲಿ ಇನ್ನಿಲ್ಲದ ಸಮಸ್ಯೆ ಎದುರಾಗೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಕೊವಿಡ್ ಕೇರ್ ಸೆಂಟರ್ ಗಳಲ್ಲಿ ಕೊಡಗಿನ ಆಹಾರ ಪದ್ಧತಿಯಂತೆ, ಕಡುಬು ಸಾಗು, ದೋಸೆ, ಚಪಾತಿ ಇಂತಹವುಗಳನ್ನು ನೀಡಲಾಗುತ್ತಿದೆ. ಜೊತೆಗೆ ಸರ್ಕಾರ ಮೆನು ಪ್ರಕಾರ ಮೊಟ್ಟೆಯನ್ನು ಕೊಡಲು ಅವಕಾಶವಿದೆ. ಆದರೆ ಕೇವಲ ಮೊಟ್ಟೆ ಕೊಟ್ಟರೆ ಅದು ಬಾಯಿಗೆ ರುಚಿಸದಿರಬಹುದು ಎಂದು ಜೊತೆಗೆ ಮೊಟ್ಟೆ ಮಸಾಲ ಮಾಡಿಕೊಡಲಾಗುತ್ತಿದೆ.
ಅದಕ್ಕಿಂತ ಮುಖ್ಯವಾಗಿ ವಾರದಲ್ಲಿ ಒಂದು ದಿನ ಚಿಕನ್ ಊಟ ಪೂರೈಸಲಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ಮಸಾಲೆಯನ್ನು ಬಳಸಿ ಚಿಕನ್ ಮಾಡಿ ಅದರ ಜೊತೆಗೆ ಚಪಾತಿ ಪೂರೈಸಲಾಗುತ್ತಿದೆ. ಕೊಡಗಿನಲ್ಲಿ ಸಹಜವಾಗಿ ಹೆಚ್ಚು ಮಾಂಸ ಪ್ರಿಯರಾಗಿದ್ದು, ಮಾಂಸದೂಟ ಇಲ್ಲದಿದ್ದರೆ ಬಾಯಿಗೆ ರುಚಿಸೋದಿಲ್ಲ. ಹೀಗಾಗಿ ಸರ್ಕಾರದ ಮೆನು ಪ್ರಕಾರಕ್ಕೆ ಬದಲಾಗಿ ರುಚಿಕಟ್ಟಾದ ಮತ್ತು ಕೊಡಗಿನ ಆಹಾರ ಪದ್ಧತಿಯ ಊಟವನ್ನೇ ಪೂರೈಸಲಾಗುತ್ತಿದೆ. ಇದು ಕೊವಿಡ್ ಸೋಂಕಿತರಿಗೆ ತುಂಬಾನೇ ಖುಷಿ ಕೊಟ್ಟಿದೆ.