– ಬಿಎಸ್ಸಿ ಮಾಡುತ್ತಿರುವ ಯುವತಿ
– ತಿರುವನಂತಪುರಂ ಮೇಯರ್ ಆಗಿ ಆಯ್ಕೆ
ತಿರುವನಂತಪುರಂ: ಭಾರತದ ಅತೀ ಕಿರಿಯ ಮೇಯರ್ ಆಗಿ 21 ವರ್ಷದ ಆರ್ಯ ರಾಜೇಂದ್ರನ್ ಆಯ್ಕೆಯಾಗಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಇತ್ತೀಚೆಗೆ ತಿರುವನಂತಪುರಂ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಸಿಪಿಎಂ ಪಕ್ಷದಿಂದ ಮುಡವನ್ಮುಗಳ್ ವಾರ್ಡ್ನಿಂದ ಆರ್ಯ ರಾಜೇಂದ್ರ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಬಳಿಕ ಸಿಪಿಎಂ ಜಿಲ್ಲಾ ಕಾರ್ಯಾಲಯ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಶಿಫಾರಸು ಮಾಡಿತ್ತು.
ಇದೀಗ ರಾಜ್ಯ ಸಮಿತಿಯೂ ಸಹ ಆರ್ಯ ರಾಜೇಂದ್ರನ್ ಅವರನ್ನು ಕೇರಳದ ರಾಜಧಾನಿ ತಿರುವನಂತಪುರಂ ಮೇಯರ್ ಆಗಿ ಆಯ್ಕೆ ಮಾಡಿದೆ. ಈ ಮೂಲಕ ಅತೀ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರ್ಯ ಅವರ ತಂದೆ ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಗೃಹಣಿಯಾಗಿದ್ದಾರೆ.
ತಿರುವನಂತಪುರಂನ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಬಿಎಸ್ಸಿ ಮ್ಯಾಥ್ಸ್ ವಿದ್ಯಾರ್ಥಿನಿಯಾಗಿರುವ ಆರ್ಯ ಎಸ್ಎಫ್ಐ ಸದಸ್ಯೆಯಾಗಿದ್ದಾರೆ.