– 10 ತಿಂಗಳ ಹಿಂದೆಯಷ್ಟೇ ಮದುವೆ
– ಮೊದಲು ಸೀಮೆಎಣ್ಣೆ ಕುಡಿದಿದ್ದ ಹೆಂಡ್ತಿ
ಚೆನ್ನೈ: ಹತ್ತು ತಿಂಗಳ ಹಿಂದೆ ಮದುವೆಯಾಗಿದ್ದ ದಂಪತಿ ಜಗಳ ಮಾಡಿಕೊಂಡು ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನ ಪಶ್ಚಿಮ ಮಾಂಬಲಂನಲ್ಲಿ ನಡೆದಿದೆ.
ಮೃತರನ್ನು ಮಣಿಕಂಠನ್ (35) ಮತ್ತು ರಾಧಿಕಾ (29) ಎಂದು ಗುರುತಿಸಲಾಗಿದೆ. ಈ ದಂಪತಿ ಮದುವೆಯಾಗಿ ಕೇವಲ 10 ತಿಂಗಳಾಗಿತ್ತು. ಮಾಣಿಕಂಠನ್ ಪೆರುಂಬಕ್ಕಂನ ರಾಸಾಯನಿಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಇನ್ನೂ ರಾಧಿಕಾ ಕಿಲ್ಪೌಕ್ನಲ್ಲಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.
ಎರಡು ತಿಂಗಳ ಹಿಂದೆ ಮಣಿಕಂಠನ್ ಕೋವಿಡ್-19 ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ವರದಿ ಬಂದಿತ್ತು. ನಂತರ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ. ಆದರೆ ಅಂದಿನಿಂದ ದಂಪತಿಯ ನಡುವೆ ಜಗಳವಾಗುತ್ತಿತ್ತು. 15 ದಿನಗಳ ಹಿಂದೆ ಜಗಳದ ನಂತರ ರಾಧಿಕಾ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಕಂಠನ್ ಮತ್ತು ರಾಧಿಕಾ ಇಬ್ಬರ ನಡುವೆ ಮತ್ತೆ ಜಗಳವಾಗಿದ್ದು, ಮಣಿಕಂಠನ್ ಮನೆಯಿಂದ ಹೊರಗೆ ಹೋಗಿದ್ದಾನೆ. ಆಗ ರಾಧಿಕಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆಯನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ರಾಧಿಕಾ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ನಂತರ ಮಣಿಕಂಠನ್ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿ ಪತ್ನಿ ರಾಧಿಕಾ ನೇಣು ಹಾಕಿಕೊಂಡಿದ್ದ ಅದೇ ಜಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾಹಿತಿ ತಿಳಿದು ಮಾಂಬಲಂ ಪೊಲೀಸರು ಸ್ಥಳಕ್ಕೆ ಬಂದು ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.