ಭೋಪಾಲ್: ಲಾಕ್ಡೌನ್ನಿಂದ ಮದ್ಯ ಸಿಗದೆ ಕಂಗೆಟ್ಟಿದ್ದ ಕುಡುಕನೋರ್ವ ಬಿಯರ್ ಬಾಟಲ್ನಲ್ಲಿ ಇಟ್ಟಿದ್ದ ಆ್ಯಸಿಡ್ ಕುಡಿದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಭೋಪಾಲ್ನ ಚಕ್ಕಿ ಕ್ರಾಸಿಂಗ್ ನಿವಾಸಿ ಸುರೇಶ್ ಸಜಲ್ಕರ್(50) ಆ್ಯಸಿಡ್ ಕುಡಿದು ಮೃತಪಟ್ಟಿದ್ದಾನೆ. ಲಾಕ್ಡೌನ್ ಹಿನ್ನೆಲೆ ಮದ್ಯ ಮಾರಾಟ ಸ್ಥಗಿತಗೊಂಡಿದೆ. ಹೀಗಾಗಿ ಮದ್ಯಪಾನ ವ್ಯಸನಿಗಳು ಮದ್ಯ ಸಿಗದೇ ಹತಾಶರಾಗಿದ್ದಾರೆ. ಸುರೇಶ್ ಕೂಡ ಮದ್ಯ ಸಿಗದೇ ಹತಾಶನಾಗಿದ್ದನು. ಇದೇ ವೇಳೆ ಬಿಯರ್ ಬಾಟಲಿ ಕಂಡ ಖುಷಿಗೆ ಅದರಲ್ಲಿ ಏನಿದೆ ಎಂದು ಪರಿಶೀಲಿಸದೇ ಬಾಟಲಿ ಎತ್ತಿ ಕುಡಿದಿದ್ದಾನೆ. ಆ ಬಳಿಕ ಅದರಲ್ಲಿ ಆ್ಯಸಿಡ್ ಇದೆ ಎಂದು ತಿಳಿದಿದ್ದು, ಆ್ಯಸಿಡ್ ಕುಡಿದ ತಕ್ಷಣವೇ ಆತನ ಸ್ಥಿತಿ ಗಂಭಿರವಾಗಿದ್ದು, ಆತನನ್ನು ಕರೆದೊಯ್ದು ಚಿಕಿತ್ಸೆ ನೀಡಲಾಯ್ತು.
ಆದರೆ ಚಿಕಿತ್ಸೆ ಫಲಿಸದೆ ಸುರೇಶ್ ಸಾವನ್ನಪ್ಪಿದ್ದಾನೆ ಎಂದು ಟಿ ಟಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವ್ ಚೌಕ್ಸೆ ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮಂಗಳವಾರ ಪ್ರಕಟಣೆ ಹೊರಡಿಸಿ, ಕೊರೊನಾ ಲಾಕ್ಡೌನ್ ವಿಸ್ತರಣೆಯಾದ ಪರಿಣಾಮ ರಾಜ್ಯದಲ್ಲಿ ಮೇ 3ರವರೆಗೆ ಸಿನಿಮಾ ಹಾಲ್ಗಳು ಮತ್ತು ಮಾಲ್ಗಳು ತೆರೆಯುವುದಿಲ್ಲ. ಆದರೆ ಏಪ್ರಿಲ್ 20ರ ಬಳಿಕ ಮದ್ಯದಂಗಡಿ ತೆರೆಯುತ್ತದೆ ಎಂದು ತಿಳಿಸಿದ್ದರು.