– ಉಳಿತಾಯದ ಹಣದ ಖರ್ಚು
– ಪ್ರತಿದಿನ 2 ಸಾವಿರ ಆಹಾರ ಪ್ಯಾಕೆಟ್ ವಿತರಣೆ
ಬೆಂಗಳೂರು: ಲಾಕ್ಡೌನ್ನಿಂದ ಅನೇಕ ಬಡವರು, ನಿರಾಶ್ರಿತರು ಮತ್ತು ನಿರ್ಗತಿಕರು ಊಟಕ್ಕಾಗಿ ಪರದಾಡುತ್ತಿದ್ದಾರೆ. ಅಂತವರಿಗೆ ಸರ್ಕಾರ ಸೇರಿದಂತೆ ಅನೇಕರು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬರು ತನ್ನ ಮನೆಯವರಿಗೆ ಊಟವಿಲ್ಲದಿದ್ದರೂ ಬೇರೆಯವರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ.
27 ವರ್ಷದ ಶೆರು ಶೇಖ್ ಬಡವರಿಗೆ ಊಟ ಪೂರೈಕೆ ಮಾಡುತ್ತಿದ್ದಾರೆ. ಇವರು ಝೊಮಾಟೋದಲ್ಲಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಲಾಕ್ಡೌನ್ ಆದಾಗಿನಿಂದ ಯಾವುದೇ ಕೆಲಸವಿಲ್ಲದ ಕಾರಣ ಶೇಖ್ ಮನೆಯಲ್ಲಿಯಿದ್ದರು. ಆದರೆ ಮನೆಯಲ್ಲಿ ಸುಮ್ಮನೇ ಕೂರದೆ ಉಚಿತವಾಗಿ ಜನರಿಗೆ ಆಹಾರವನ್ನು ತಲುಪಿಸುವಂತಹ ಕೆಲಸ ಮಾಡುತ್ತಿದ್ದಾರೆ.
ಅಗತ್ಯವಿರುವವರನ್ನು ತಲುಪಲು ಶೇಖ್ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವರೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 2,000 ಆಹಾರ ಪ್ಯಾಕೆಟ್ಗಳನ್ನು ಪೂರೈಸುತ್ತಿದ್ದಾರೆ.
ಸದ್ಯಕ್ಕೆ ನನಗೆ ಯಾವುದೇ ಕೆಲಸವಿಲ್ಲ. ಅಲ್ಲದೇ ನನ್ನ ಕುಟುಂಬವು ಹಸಿದುಕೊಂಡಿದೆ. ಆದರೆ ಕೆಲವರ ಪರಿಸ್ಥಿತಿ ಇನ್ನೂ ಕೆಟ್ಟಾಗಿದೆ. ಹೀಗಾಗಿ ವಾರ್ಡ್ 33ರ ಮನೋರಾಯನಪಾಳ್ಯದಲ್ಲಿ ಅಗತ್ಯವಿರುವವರಿಗೆ ಆಹಾರವನ್ನು ತಲುಪಿಸುತ್ತಿದ್ದೇನೆ. ಆಹಾರವನ್ನು ತಲುಪಿಸಲು ನನಗೆ ಪಾಸ್ ಇದೆ. ಆದರೆ ಝೊಮಾಟೋದಿಂದ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಮನೆಯಲ್ಲಿ ಕುಳಿತುಕೊಂಡು ಸಮಯ ವ್ಯರ್ಥ ಮಾಡುವ ಬದಲು ಬೇರೆ ಏನಾದರೂ ಕೆಲಸ ಮಾಡಬೇಕು ಎಂದು ಯೋಚಿಸಿದ್ದೆ. ಅದೇ ರೀತಿ ನಾನು ಯಶವಂತಪುರ ರೈಲ್ವೇ ನಿಲ್ದಾಣದ ಬಳಿಯಿಂದ ಆಹಾರದ ಪೊಟ್ಟಣಗಳನ್ನು ಸಂಗ್ರಹಿಸಿ ಮನೋರಾಯನಪಾಳ್ಯದ ಜನರಿಗೆ ವಿತರಿಸುತ್ತೇನೆ ಎಂದು ಶೇಖ್ ತಿಳಿಸಿದರು.
ಕಡಿಮೆ ಆಹಾರ ಪ್ಯಾಕೆಟ್ಗಳಿರುವ ದಿನಗಳಲ್ಲಿ, ಸಾಮಾನ್ಯವಾಗಿ ತನ್ನ ಕುಟುಂಬಕ್ಕಾಗಿ ಇಡುವ ಪಾಲನ್ನು ಸಹ ಬೇರೆಯವರಿಗೆ ವಿತರಿಸುತ್ತಿದ್ದಾರೆ. ಶೇಖ್ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು, ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಎಂದರೆ ಶೇಖ್ ಮಾತ್ರ. ಆದರೂ ಆಹಾರ ಪ್ಯಾಕೆಟ್ಗಳನ್ನು ಸಾಗಿಸಲು ಮತ್ತು ವಿತರಿಸಲು ತಾವು ಉಳಿತಾಯ ಮಾಡಿಕೊಂಡಿದ್ದ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಪ್ರತಿದಿನ ಮನೋರಾಯನಪಾಳ್ಯದ ಜನರು ಶೇಖ್ ಬರುವ ಆಟೋಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಒಂದು ವೇಳೆ ಶೇಕ್ ಬರುವುದನ್ನು ತಡ ಮಾಡಿದರೆ, ಆ ಪ್ರದೇಶದ ಬಡವರು ಆತನಿಗೆ ಮನೆಯಿಂದ ಹೊರಗೆ ನಿಂತು ಕಾಯುತ್ತಿರುತ್ತಾರೆ.
ಈ ಪ್ರದೇಶದವರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂದು ನಮಗೆ 2,000 ಆಹಾರ ಪ್ಯಾಕೆಟ್ಗಳು ಬೇಕಾಗುತ್ತವೆ. ಆದರೆ ಆಹಾರವನ್ನು ಎನ್ಜಿಒ ಸಂಸ್ಥೆವೊಂದು ಪೂರೈಸುತ್ತಿದೆ. ಹೀಗಾಗಿ ದಿನದಲ್ಲಿ ಎಷ್ಟು ಆಹಾರದ ಪೊಟ್ಟಣ ಸರಬರಾಜು ಮಾಡಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇಲ್ಲಿ ವಾಸಿಸುವವರಿಗೆ ಬಿಬಿಎಂಪಿ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.